ಕಲಘಟಗಿ: ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಸಂತೋಷ ಲಾಡ್ ಮಂಗಳವಾರ ನಾಮಪತ್ರ ಸಲ್ಲಿಸಿದರು.
ಮಡಕಿಹೊನ್ನಳ್ಳಿಯ ತಮ್ಮ ‘ಅಮೃತ ನಿವಾಸ’ದಿಂದ ಗ್ರಾಮೀಣ ಸೊಗಡಿನ ವಿವಿಧ ವಾದ್ಯಗಳೊಂದಿಗೆ ಹಾಗೂ ಅಪಾರ ಬೆಂಬಲಿಗರೊಂದಿಗೆ ಚಕ್ಕಡಿಯನ್ನು ಏರಿ ಮೆರವಣಿಗೆಯ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿದ ಸಂತೋಷ ಲಾಡ್ ಅವರು ಚುನಾವಣಾಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಿದರು.
ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನ, ಸ್ಥಳೀಯ ದೇವಸ್ಥಾನಗಳಿಗೆ, ಮಸೀದಿ, ಚರ್ಚ್ಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ತಮ್ಮ ನಿವಾಸದಲ್ಲಿ ಸೇರಿದ ಅಪಾರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿ, ‘ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಹೊಗಳಿದ ಅವರು ಈ ಬಾರಿ ಮತ್ತೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಹಾಗೂ ಕ್ಷೇತ್ರದಲ್ಲಿ ತಾವು ವಯಕ್ತಿಕವಾಗಿ ಮತ್ತು ಸರ್ಕಾರದಿಂದ ಹಲವು ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯ ಮಾಡಿರುವುದನ್ನು ಗಮನಿಸಿರುವ ಕ್ಷೇತ್ರದ ಜನರು ಚುನಾವಣೆಯಲ್ಲಿ ಆಶೀರ್ವದಿಸಲಿದ್ದಾರೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ವಿದ್ಯಾ ಬಾವನವರ, ಈರವ್ವ ದಾಸನಕೊಪ್ಪ, ಸಂಡೂರ ಶಾಸಕ ಈ. ತುಕಾರಾಮ, ಕಾಂಗ್ರೆಸ್ ಪಕ್ಷದ ತಾಲ್ಲೂಕು ಪಂಚಾಯ್ತಿ, ಪಟ್ಟಣ ಪಂಚಾಯ್ತಿ ಸದಸ್ಯರು, ಎಸ್.ಟಿ ಮೋರ್ಚಾ ಅಧ್ಯಕ್ಷ ನಾಗಪ್ಪ ಕನಕಪ್ಪನವರ, ಕೆಎಂಎಫ್ ನಿರ್ದೇಶಕ ಯಲ್ಲಪ್ಪ ದಾಸನಕೊಪ್ಪ, ಬಾಬು ಅಂಚಟಗೇರಿ, ಮುಖಂಡರಾದ ಪ್ರಶಾಂತ ಸುಳ್ಳದ, ಬಸವರಾಜ ಕಲ್ಲೂರ, ನಿಂಗಪ್ಪ ಬೆಳ್ಳಿವಾಲಿ, ಹನುಮಂತ ಹರಿಜನ, ಪ್ರಭು ರಾಮನಾಳ, ಲಿಂಗರೆಡ್ಡಿ ನಡುವಿನಮನಿ, ಮೈನುದ್ದೀನ್ ಕಾಶೀಮನವರ, ಬಾಷಾ ಬೇಪಾರಿ, ಹನುಮಂತ ಕಾಳೆ, ಶಂಕರಗಿರಿ ಬಾವನವರ ಈ ಸಂದರ್ಭದಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.