ಧಾರವಾಡ/ಹುಬ್ಬಳ್ಳಿ: ಕಡಲೆ ಖರೀದಿಗೆ ಈಗಿರುವ 10 ಕ್ವಿಂಟಲ್ ಮಿತಿಯನ್ನು 25 ಕ್ವಿಂಟಲ್ಗೆ ಏರಿಸುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಭರವಸೆ ನೀಡಿದರು.
ಧಾರವಾಡದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶ ಹಾಗೂ ಮತ್ತು ಅಮರಗೋಳ ಎ.ಪಿ.ಎಂ.ಸಿ. ಆವರಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಆರಂಭಿಸಲಾದ ಕಡಲೆ ಖರೀದಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
‘ಸರ್ಕಾರ ಪ್ರತಿ ಕ್ವಿಂಟಲ್ ಕಡಲೆಗೆ ₹4,400 ರಂತೆ ಖರೀದಿಸಲು ಆರಂಭಿಸಿದ್ದು, ಪ್ರತಿ ರೈತರಿಗೆ 10 ಕ್ವಿಂಟಲ್ ಮಾರಾಟ ಮಾಡಬಹುದಾಗಿದೆ. ಖರೀದಿ ಮಿತಿಯನ್ನು ಸಡಿಲಗೊಳಿಸಬೇಕೆಂಬ ರೈತರ ಮನವಿಗೆ ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ಕೇಂದ್ರ ಸರ್ಕಾರ, ವಿದೇಶದಿಂದ ಕಡಲೆ ಆಮದು ಮಾಡಿಕೊಳ್ಳುತ್ತಿರುವುದೇ ಎಲ್ಲಾ ಸಮಸ್ಯೆಗೆ ಕಾರಣ’ ಎಂದು ದೂರಿದರು. ‘ಕೃಷಿ ಉತ್ಪನ್ನ ಮಾರುಕಟ್ಟೆಗೆ ಮೂಲಸೌಕರ್ಯ ಒದಗಿಸಲಾಗುವುದು’ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಪಿಎಮ್ಸಿ ಅಧ್ಯಕ್ಷ ಸಿದ್ದಣ್ಣ ಪ್ಯಾಟಿ ಮಾತನಾಡಿ, ‘ಕಡಲೆ ಖರೀದಿ ಆರಂಭಿಸಿರುವುದು ರೈತರಿಗೆ ತುಂಬಾ ಅನುಕೂಲವಾಗಿದೆ. ಹೆಬ್ಬಳ್ಳಿಯಲ್ಲಿ ಕಡಲೆಕಾಳು ಖರೀದಿ ಕೇಂದ್ರ ಆರಂಭಿಸಬೇಕು’ ಎಂದು ಮನವಿ ಮಾಡಿದರು. ಹೆಬಸೂರಿನಲ್ಲಿ ಇನ್ನೊಂದು ಕೇಂದ್ರ ಆರಂಭಿಸಬೇಕು ಎಂದು ಎಪಿಎಂಸಿ ಸದಸ್ಯರಾದ ಮಂಜುನಾಥ ಮುದರೆಡ್ಡಿ, ಶಂಕರಗೌಡ ಪಾಟೀಲ, ರಾಯನಗೌಡ ಮನವಿ ಮಾಡಿದರು. ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದರು.
ರಾಯಪ್ಪ ಹುಡೆದ, ಮಹಾವೀರ ಜೈನ, ಎಸ್.ಎನ್.ಸುರೇಬಾನ, ಎಚ್.ಆರ್.ಸನದಿ, ರೇಣುಕಾ ಕಳ್ಳಿಮನಿ, ಅಕ್ಕಮ್ಮ ಕುಮಾರ ದೇಸಾಯಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ , ಶಂಕರಗೌಡ ಪಾಟೀಲ, ಸದಸ್ಯೆ ಗಿರಿಜಾ ಬೆಂಗೇರಿ, ವರ್ತಕರ ಸಂಘದ ಅಧ್ಯಕ್ಷ ಗುರುಪ್ರಸಾದ, ಹುಬ್ಬಳ್ಳಿ ಎಪಿಎಂಸಿ ಅಧ್ಯಕ್ಷರಾದ ಈಶ್ವರ ಕಿತ್ತೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.