ADVERTISEMENT

ಕಡಲೆ ಹುಳಿ ತೊಳೆದ ಮಳೆ

ಬಸವರಾಜ ಹಲಕುರ್ಕಿ
Published 21 ನವೆಂಬರ್ 2017, 8:47 IST
Last Updated 21 ನವೆಂಬರ್ 2017, 8:47 IST
ನರಗುಂದದಲ್ಲಿ ಭಾನುವಾರ ಸುರಿದ ಮಳೆಗೆ ಕಡಳೆ ಬೆಳೆಯ ಹುಳಿ ತೊಳೆದುಕೊಂಡು ಹೋದ ದೃಶ್ಯ
ನರಗುಂದದಲ್ಲಿ ಭಾನುವಾರ ಸುರಿದ ಮಳೆಗೆ ಕಡಳೆ ಬೆಳೆಯ ಹುಳಿ ತೊಳೆದುಕೊಂಡು ಹೋದ ದೃಶ್ಯ   

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನ ಕೆಲವಡೆ ಭಾನುವಾರ ಸುಮಾರು ಎರಡು ಗಂಟೆಗಳ ಮಳೆಯಾಗಿದ್ದು, ಕಾಳು ಕಟ್ಟುವ ಹಂತದಲ್ಲಿದ್ದ ಕಡಲೆ ಬೆಳೆಯ ಹುಳಿ ತೊಳೆದುಕೊಂಡು ಹೋಗಿದ್ದು, ರೈತರು ಆತಂಕಗೊಂಡಿದ್ದಾರೆ.

ಈ ಬಾರಿ ಮುಂಗಾರಿನಲ್ಲಿ ಹೆಸರು ಬೆಳೆ ಕೈಕೊಟ್ಟಿದ್ದರಿಂದ ಹಿಂಗಾರಿನಲ್ಲಿ ಹೆಚ್ಚಿನ ರೈತರು ಕಡಲೆ ಬಿತ್ತನೆ ಮಾಡಿದ್ದರು. ಉತ್ತಮ ಮಳೆಯಾಗಿದ್ದ ಹಿನ್ನೆಲೆಯಲ್ಲಿ ಕಡಲೆ ಸಮೃದ್ಧವಾಗಿ ಬೆಳೆದು ಕಾಳು ಕಟ್ಟಲು ಪ್ರಾರಂಭಿಸಿದ್ದವು.

‘ಭಾನುವಾರ ಸುರಿದ ಅಕಾಲಿಕ ಮಳೆಯಿಂದ ಕಡಲೆ ಕಾಳಿನ ಮೇಲಿದ್ದ ಹುಳಿ ತೊಳೆದುಕೊಂಡು ಹೋಗಿದೆ, ಇದರಿಂದ ಕಾಯಿ ಆಗಲು ತೊಂದರೆಯಾಗಿದೆ. ಈಗ ಚಳಿಯೂ ಕಡಿಮೆಯಾಗಿದೆ. ಕೀಟಗಳ ಬಾಧೆ ಹೆಚ್ಚಿದೆ. ಪದೇ ಪದೇ ಮೋಡ ಕವಿತ ವಾತಾವರಣ ಮುಂದುವರಿದಿರುವುದು ಕಡಲೆಗೆ ಕುತ್ತು ಬಂದಿದೆ’ ಎಂದು ಪಟ್ಟಣದ ರೈತ ವೀರಣ್ಣ ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಉತ್ತಮ ಬೆಳೆಯ ನಿರೀಕ್ಷೆಯಲ್ಲಿರುವ ನಾವು, ಅತ್ಯುತ್ತಮ ಬೆಲೆ ಎದುರು ನೋಡುತ್ತಿದ್ದೇವೆ. ಈಗ ಒಮ್ಮಿಂದೊಮ್ಮೆಲೆ ಬಂದ ಮಳೆಯಿಂದಾಗಿ, ನಮ್ಮ ಲೆಕ್ಕಾಚಾರ ತಲೆ ಕೆಳಗಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರುತ್ತದೋ ಇಲ್ಲವೊ ಎಂಬ ಚಿಂತೆ ಎದುರಾಗಿದೆ’ ಎಂದು ರೈತ ಈರಣ್ಣ ಹೇಳಿದರು.

ತಾಲ್ಲೂಕಿನಲ್ಲಿ ಹಿಂಗಾರಿನಲ್ಲಿ ರೈತರು ಜೋಳ, ಕಡಲೆ, ಗೋಧಿ, ಸೂರ್ಯಕಾಂತಿ ಬಿತ್ತನೆ ಮಾಡಿದ್ದು, ಕೆಲವು ಬೆಳೆಗಳು ಹೂವು ಬಿಡುವ, ಕಾಳು ಕಟ್ಟುವ ಹಂತದಲ್ಲಿವೆ. ಬೆಳೆ ಈ ಹಂತದಲ್ಲಿರುವವರಿಗೆ ಮಳೆ ಬೇಸರ ತರಿಸಿದೆ. ಆದರೆ, ಕೆಲವರು ತಡವಾಗಿ ಬಿತ್ತನೆ ಮಾಡಿದ್ದು, ಬೆಳೆಗಳು ಮೇಲೇರುವ ಹಂತದಲ್ಲಿವೆ. ಅಂತಹ ಬೆಳೆಗಳಿಗೆ ನೀರು ಅವಶ್ಯವಾಗಿತ್ತು. ಈಗ ಬಿದ್ದ ಅಕಾಲಿಕ ಮಳೆಯು ರೈತರಿಗೆ ಸಂತಸ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.