ಗದಗ: ‘ಜಿಲ್ಲೆಯ ಬಿಂಕದಕಟ್ಟಿ ಮೃಗಾಲಯವನ್ನು ಆಕರ್ಷಕ ಹಾಗೂ ಮಾದರಿ ಪ್ರವಾಸಿ ತಾಣವನ್ನಾಗಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಭಾನುವಾರ ಮೃಗಾಲಯದಲ್ಲಿ ಹಕ್ಕಿಗಳಿಗಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಿರುವ ಪಂಜರ ಮತ್ತು ಪಂಜರದೊಳಗೆ ನಡೆದುಕೊಂಡು ಹೋಗಿ ಪ್ರವಾಸಿಗರು ಹಕ್ಕಿಗಳನ್ನು ಸಮೀಪದಿಂದ ವೀಕ್ಷಣೆ ಮಾಡಬಹುದಾದ ‘ಹಕ್ಕಿ ಹಾದಿ’ (ಪಾದಚಾರಿ ಸೇತುವೆ) ಉದ್ಘಾಟಿಸಿ ಅವರು ಮಾತನಾಡಿದರು.
‘ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ಜತೆಯಾಗಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಕಡಿಯಬೇಕಾಗಿದ್ದ ಮರಗಳನ್ನು ಸ್ಥಳಾಂತರಗೊಳಿಸಿ ನೆಟ್ಟಿದ್ದು, ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆಗೆ ಗುರುತಿಸಿರುವ ನಾಗಾವಿಯಲ್ಲಿ 250 ಹೆಚ್ಚು ಮರಗಳನ್ನು ನೆಡಲಾಗಿದೆ ಎಂದರು.
ಕರ್ನಾಟಕ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವಿರೇಶ ಇದ್ದರು. ‘ಬಿಂಕದಕಟ್ಟಿ ಮೃಗಾಯಲಯಕ್ಕೆ ಕಿರು ಮೃಗಾಲಯದಿಂದ ಸಣ್ಣ ಮೃಗಾಲಯಕ್ಕೆ ಬಡ್ತಿ ಸಿಕ್ಕಿದೆ. ಶೀಘ್ರದಲ್ಲೇ ಇಲ್ಲಿಗೆ ಹುಲಿಗಳನ್ನು ತರಲಾಗುವುದು. ಮೃಗಾಲಯ ಅಭಿವೃದ್ಧಿಗೆ ಪ್ರಾಧಿಕಾರ ₹ 1.25 ಕೋಟಿ ನೀಡಿದ್ದು, ಅಭಿವೃದ್ಧಿ ಕಾರ್ಯಗಳು ಚೆನ್ನಾಗಿ ನಡೆಯತ್ತಿವೆ’ ಎಂದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ವಾಸಣ್ಣ ಕುರಡಗಿ, ಉಪಾಧ್ಯಕ್ಷೆ ರೂಪಾ ಅಂಗಡಿ, ನಗರಸಭೆ ಅಧ್ಯಕ್ಷ ಬಿ.ಬಿ.ಅಸೂಟಿ, ಪ್ರಕಾಶ ಬಾಕಳೆ, ಪ್ರಭು ಬುರಬುರೆ, ಜಿಲ್ಲಾಧಿಕಾರಿ ಮನೋಜ್ ಜೈನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ, ಡಿಸಿಎಫ್ ಡಿ.ಪಿರವಿ, ಸಿ.ಇ.ಓ ಮಂಜುನಾಥ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.