ADVERTISEMENT

ಬಿಜೆಪಿ ನುಡಿದಂತೆ ನಡೆಯಲಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 7:38 IST
Last Updated 3 ಡಿಸೆಂಬರ್ 2017, 7:38 IST
ನರಗುಂದದಲ್ಲಿ ನಡೆದ ಮಹದಾಯಿ ಧರಣಿಯ 872ನೇ ದಿನ ಶನಿವಾರ ಹೋರಾಟ ಸಮಿತಿ ಸದಸ್ಯ ಶ್ರೀಶೈಲ ಮೇಟಿ ಮಾತನಾಡಿದರು
ನರಗುಂದದಲ್ಲಿ ನಡೆದ ಮಹದಾಯಿ ಧರಣಿಯ 872ನೇ ದಿನ ಶನಿವಾರ ಹೋರಾಟ ಸಮಿತಿ ಸದಸ್ಯ ಶ್ರೀಶೈಲ ಮೇಟಿ ಮಾತನಾಡಿದರು   

ನರಗುಂದ: ‘ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ರಾಜಕಾರಣಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪಕ್ಷಗಳು ನುಡಿದಂತೆ ನಡೆಯಬೇಕು’ ಎಂದು ಹೋರಾಟ ಸಮಿತಿ ಸದಸ್ಯ ಶ್ರೀಶೈಲ ಮೇಟಿ ಆಗ್ರಹಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 872ನೇ ದಿನ ಶನಿವಾರ ಅವರು ಮಾತನಾಡಿದರು.‘ಜನಪ್ರತಿನಿಧಿಗಳು ಸ್ವ ಹಿತಾಸಕ್ತಿಗಾಗಿ ರೈತರನ್ನು ಒಡೆದು ಆಳುವ ನೀತಿ ಕೈ ಬಿಡಬೇಕು. ಬಿಜೆಪಿ ಮುಖಂಡ ಬಿ.ಎಸ್‌. ಯಡಿಯೂರಪ್ಪನವರು ನುಡಿದಂತೆ ನಡೆದು ಡಿ. 15ರ ಒಳಗೆ ರೈತರ ಬೇಡಿಕೆ ಈಡೇರಿಸಬೇಕು’ ಎಂದು ಹೇಳಿದರು.

‘ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ, ಯಾವುದೇ ಅಧಿಕಾರದ ಮೋಹಕ್ಕಾಗಿಯೂ ಅಲ್ಲ. ನಮ್ಮ ಪಾಲಿನ ನೀರಿನ ಹಕ್ಕನ್ನಷ್ಟೇ ನಾವು ಕೇಳುತ್ತಿದ್ದೇವೆ. ಈ ಹೋರಾಟದಲ್ಲಿ ರೈತ ಸಂಘಟನೆಗಳು ಕೈಜೋಡಿಸಿ, ಬಲ ತುಂಬಬೇಕು. ರಾಜ್ಯದ ಮುಖ್ಯಮಂತ್ರಿ, ಪ್ರಧಾನಿ ಅವರ ಮೇಲೆ ಒತ್ತಡ ಹೇರಬೇಕು’ ಎಂದು ಮೇಟಿ ಒತ್ತಾಯಿಸಿದರು.

ADVERTISEMENT

ಹೋರಾಟ ಸಮಿತಿ ಸದಸ್ಯ ಈರಣ್ಣ ಗಡಗಿಶೆಟ್ಟರ ಮಾತನಾಡಿ, ‘ಮಹದಾಯಿ ಹೋರಾಟ ಇಡೀ ರಾಜ್ಯದಲ್ಲಿ ಜನಾಂದೋಲನವಾಗಿ ಬದಲಾಗಿದೆ. ಯಾವ ರಾಜಕೀಯ ಪಕ್ಷದಿಂದಲೂ ಇದನ್ನು ಹತ್ತಿಕ್ಕಲು ಸಾಧ್ಯವಿಲ್ಲ. ರೈತರು ಶಾಂತಿಯುತವಾಗಿ, ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಇದನ್ನು ಮನಗಂಡು ಬೇಡಿಕೆಗೆ ಸ್ಪಂದಿಸಬೇಕು’ ಎಂದರು. ಧರಣಿಯಲ್ಲಿ ರಮೇಶ ನಾಯ್ಕರ, ಎಸ್‌.ಕೆ.ಗಿರಿಯಣ್ಣವರ, ಹನಮಂತ ಪಡೆಸೂರ, ವೆಂಕಪ್ಪ ಹುಜರತ್ತಿ, ಚನ್ನಪ್ಪಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.