ನರಗುಂದ: ‘ಮಹಾದಾಯಿ ಹೋರಾಟ ಕೇವಲ ಹೋರಾಟಗಾರರಿಗೆ ಮೀಸ ಲಾಗಿದೆ ಎಂಬಂತೆ ಜನಪ್ರತಿನಿಧಿಗಳು ಮಾತನಾಡುತ್ತಿದ್ದಾರೆ. ನೀರು ಬಂದರೆ ಉತ್ತರ ಕರ್ನಾಟಕದ ಸರ್ವರೂ ಲಾಭ ಪಡೆಯಲಿದ್ದಾರೆ. ಇದರ ಬಗ್ಗೆ ಜನಪ್ರತಿನಿಧಿಗಳು ಅರಿತು ಸಂವಿಧಾನ ಬದ್ಧರಾಗಿ ನಡೆದುಕೊಳ್ಳಿ’ ಎಂದು ಮಹಾದಾಯಿ ಹೋರಾಟ ಸಮಿತಿ ಸದಸ್ಯ ವೀರಣ್ಣ ಸೊಪ್ಪಿನ ಒತ್ತಾಯಿಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 671ನೇ ದಿನವಾದ ಮಂಗಳವಾರ ಮಾತನಾಡಿದರು. ನಾಲ್ಕು ದಶಕಗಳ ಬೇಡಿಕೆ ಈಡೇರುತ್ತಿಲ್ಲ. ನಿರಂತರ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ, ಇದಕ್ಕೆ ಸಿಎಂ, ಪಿಎಂ ಸೇರಿದಂತೆ ಯಾರೂ ಗಮನಹರಿಸದೇ ಇರುವುದು ವಿಷಾದಕರ. ನೀರು ಹರಿಯುವವರೆಗೂ ಹೋರಾಟ ಕೈ ಬಿಡುವ ಮಾತೇ ಇಲ್ಲ. ಇದನ್ನರಿತು ಸರ್ಕಾರಗಳು ಬೇಡಿಕೆ ಈಡೇರಿಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಮಹಾದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಮಾತ ನಾಡಿ, ‘ಪ್ರಧಾನಿ ಸರಿಯಾಗಿ ಸ್ಪಂದಿಸು ತ್ತಿಲ್ಲ. ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ಸಲಹೆ ನೀಡಿಲ್ಲ. ಆದರೂ, ನಾವು ನಮ್ಮ ಹೋರಾಟ ಬಿಡುವುದಿಲ್ಲ. ಮಲಪ್ರಭೆ ಹರಿಯಲೇಬೇಕು. ನಾಲ್ಕು ಜಿಲ್ಲೆಗಳ 9 ತಾಲ್ಲೂಕುಗಳ ಜನರು ಕನಸು ನನಸಾಗಲೇಬೇಕು. ಅಲ್ಲಿಯವರೆಗೆ ಹೋರಾಟದಿಂದ ಕದಲುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಚಂದ್ರಗೌಡ ಪಾಟೀಲ ಮಾತನಾಡಿ ಗೋವಾ ರಾಜ್ಯ ಸುಳ್ಳು ಮಾಹಿತಿ ನೀಡುವ ಮೂಲಕ ಕರ್ನಾಟಕಕ್ಕೆ ಅನ್ಯಾಯ ಮಾಡಲು ನೋಡುತ್ತಿದೆ. ಗೋವಾದ ಆಟ ಕನ್ನಡಿಗರ ಮುಂದೆ ಎಂದು ನಡೆಯದು. ನೀರನ್ನು ಪಡದೇ ತೀರುತ್ತೇವೆ ಎಂದರು.
ಧರಣಿಯಲ್ಲಿ ಎಸ್.ಬಿ.ಜೋಗನ್ನ ವರ, ಈರಣ್ಣ ಗಡಗಿಶೆಟ್ರ, ವೆಂಕಪ್ಪ ಹುಜರತ್ತಿ, ಅನಸವ್ವ ಶಿಂಧೆ, ರತ್ನವ್ವ ಸವಳಬಾವಿ, ರಮೇಶ ನಾಯ್ಕರ, ಯಲ್ಲಪ್ಪ ಚಲುವನ್ನವರ, ಚನ್ನಬಸವ್ವ್ವಾ ಯಟ್ಟಿ, ಚನ್ನಪ್ಪಗೌಡ ಪಾಟೀಲ, ಕಾಡಪ್ಪ ಕಾಕನೂರ, ಚನ್ನಬಸು ಹುಲಜೋಗಿ, ವಾಸು ಚವ್ಹಾಣ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.