ADVERTISEMENT

ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ಬೇಕಿದೆ ಚಿಕಿತ್ಸೆ!

ನಾಗರಾಜ ಎಸ್‌.ಹಣಗಿ
Published 8 ಸೆಪ್ಟೆಂಬರ್ 2017, 4:59 IST
Last Updated 8 ಸೆಪ್ಟೆಂಬರ್ 2017, 4:59 IST
ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಹಳೆಯ ಎಕ್ಸರೇ ಯಂತ್ರ
ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಹಳೆಯ ಎಕ್ಸರೇ ಯಂತ್ರ   

ಲಕ್ಷ್ಮೇಶ್ವರ: ನಿತ್ಯ 300–400 ಜನರು ತಪಾಸಣೆ ಮತ್ತು ಚಿಕಿತ್ಸೆಗಾಗಿ ಬರುವ ಇಲ್ಲಿನ ಸರ್ಕಾರಿ ಆಸ್ಪತ್ರೆ ಅನೇಕ ಸಮಸ್ಯೆ ಗಳ ಸುಳಿಯಲ್ಲಿ ಸಿಕ್ಕು ನರಳುತ್ತಿದ್ದು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಮರೀಚಿಕೆ ಆಗುತ್ತಿದೆ.

ವೈದ್ಯರ ಕೊರತೆ: ಲಕ್ಷ್ಮೇಶ್ವರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಊರುಗಳಿಂದ ದಿನಾಲೂ ನೂರಾರು ಜನರು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಜನಸಂಖ್ಯೆಗೆ ಅನು ಗುಣವಾಗಿ ಕನಿಷ್ಠ ಐದು ಜನ ಪೂರ್ಣಾವಧಿ ವೈದ್ಯರ ಅಗತ್ಯ ಇದೆ. ಆದರೆ ಸದ್ಯ ಮೂರು ಮಂದಿ ವೈದ್ಯರು ಸೇವೆ ಸಲ್ಲಿಸುತ್ತಿದ್ದು ತುರ್ತಾಗಿ ಓರ್ವ ಮಹಿಳಾ ತಜ್ಞ ವೈದ್ಯರ ನೇಮಕದ ಅಗತ್ಯ ಇದೆ.

ದಾದಿಯರ ಕೊರತೆ: ಅಂದಾಜು 20 ಜನ ದಾದಿಯರ ಅವಶ್ಯಕತೆ ಇದೆ. ಆದರೆ ಪಟ್ಟಣದ ಆಸ್ಪತ್ರೆಯಲ್ಲಿ ಸದ್ಯ ಕೇವಲ 8 ಜನ ದಾದಿಯರು ಕೆಲಸ ನಿರ್ವಹಿಸು ತ್ತಿದ್ದಾರೆ. ಹೀಗಾಗಿ, ಸೋಮವಾರ ಮತ್ತು ಶುಕ್ರವಾರ ರೋಗಿಗಳಿಗೆ ಚುಚ್ಚುಮದ್ದು ನೀಡಲು ದಾದಿಯರು ಹರಸಾಹಸ ಪಡುತ್ತಿದ್ದಾರೆ.

ADVERTISEMENT

ಓಬೇರಾಯನ ಕಾಲದ ಎಕ್ಸರೇ ಯಂತ್ರ: ಈ ಆಸ್ಪತ್ರೆಯಲ್ಲಿ ಓಬೇರಾಯನ ಕಾಲದ ಎಕ್ಸರೇ ಯಂತ್ರ ಇದ್ದು ಅದರಿಂದ ಸರಿ ಯಾಗಿ ಎಕ್ಸರೇ ತೆಗೆಯಲು ಆಗುತ್ತಿಲ್ಲ. ‘ಸದ್ಯ ಯಂತ್ರದಿಂದ ಕಡಿಮೆ ಸಾಮ ರ್ಥ್ಯದ ಎಕ್ಸರೇ ತೆಗೆಯಲು ಮಾತ್ರ ಸಾಧ್ಯ. ಆದರೆ ಪ್ರತಿ ತಿಂಗಳು 250–300 ಎಕ್ಸರೇ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ.

ತಿಂಗಳಿಗೆ ಎಕ್ಸರೇ ತೆಗೆಯುವುದರಿಂದ ₹ 8ರಿಂದ 10 ಸಾವಿರ  ಸಂಗ್ರಹ ಆಗುತ್ತದೆ. ಆದ್ದರಿಂದ ಉತ್ತಮ ಗುಣಮಟ್ಟದ ಸಾಮರ್ಥ್ಯವಿರುವ ಯಂತ್ರ ಅಳವಡಿಸಬೇಕಿದೆ. ಹೊಸ ಡಿಜಿಟಲ್‌ ಎಕ್ಸರೇ ಯಂತ್ರಕ್ಕಾಗಿ ಬೇಡಿಕೆ ಸಲ್ಲಿಸಿದ್ದೇವೆ. ಇನ್ನು ಕೆಲ ದಿನಗಳಲ್ಲೆ ಹೊಸ ಯಂತ್ರ ಬರು ತ್ತದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಗಿರೀಶ ಮರಡ್ಡಿ ಹೇಳುತ್ತಾರೆ.

ಹಾಸಿಗೆಗಳ ಕೊರತೆ: ಇದು 30 ಹಾಸಿಗೆ ಗಳ ಆಸ್ಪತ್ರೆಯಾಗಿದೆ. ಆದರೆ ಪ್ರತಿನಿತ್ಯ ಅಂದಾಜು 50–60 ಜನರು ಒಳರೋಗಿ ಗಳಾಗಿ ಚಿಕಿತ್ಸೆ ಪಡೆಯುಬೇಕಾಗುತ್ತದೆ. ಹೀಗಾಗಿ ಎಲ್ಲ ರೋಗಿಗಳಿಗೆ ಬೆಡ್‌ ದೊರೆಯುವುದಿಲ್ಲ. ಕಾರಣ ಒಂದೇ ಹಾಸಿಗೆ ಮೇಲೆ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡುವುದು ಕೂಡ ಇಲ್ಲಿ ಅನಿ ವಾರ್ಯ ಆಗಿದೆ.

ರಕ್ತ ಸಂಗ್ರಹ ಘಟಕ ಇಲ್ಲ: ಲಕ್ಷ್ಮೇಶ್ವರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಈಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿ ಘಟಿಸುತ್ತಿದ್ದು ಆಸ್ಪತ್ರೆಯಲ್ಲಿ ತುರ್ತಾಗಿ ಒಂದು ರಕ್ತ ಸಂಗ್ರಹ ಘಟಕ ತೆರೆಯುವ ಅಗತ್ಯ ಇದೆ ಎಂಬುದು ಸ್ಥಳೀಯರ ಆಗ್ರಹ.

* * 

ಲಕ್ಷ್ಮೇಶ್ವರ ಆಸ್ಪತ್ರೆಗೆ ಜಿಲ್ಲಾ ವೈದ್ಯಾಧಿಕಾರಿ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಿ, ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವ ವ್ಯವಸ್ಥೆ ಮಾಡಬೇಕು
ಪದ್ಮರಾಜ ಪಾಟೀಲ
ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.