ಗದಗ: ದೇಶದಲ್ಲೇ ಮೊದಲ ಬಾರಿಗೆ ಇ–-ಪಾವತಿ ವ್ಯವಸ್ಥೆಯನ್ನು ಗದಗ ಹಾಗೂ ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಜಾರಿಗೆ ತರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ರೈತರಿಗೆ ಹಾಗೂ ವರ್ತಕರಿಗೆ ಶೋಷಣೆ ಮುಕ್ತ ಕೃಷಿ ಮಾರಾಟ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅಭಿಪ್ರಾಯಪಟ್ಟರು.
ಗದಗ ಎಪಿಎಂಸಿಯಲ್ಲಿ ಸೋಮವಾರ ಅವರು ಇ–ಪಾವತಿ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು.
‘ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ, ಅದರ ಹಣ ಪಡೆಯಲು ಪರದಾಡಬೇಕಾದ ಪರಿಸ್ಥಿತಿ ಇತ್ತು. ಆದರೆ, ಇ–ಪಾವತಿ ವ್ಯವಸ್ಥೆಯಡಿ ವೇತನ ಪಾವತಿಯಲ್ಲಿ ಆಗುತ್ತಿದ್ದ ವಿಳಂಬ ತಪ್ಪಲಿದೆ. ಎಪಿಎಂಸಿಗೆ ರೈತರು ತರುವ ಉತ್ಪನ್ನಗಳನ್ನು ಗ್ರೇಡಿಂಗ್ ಮೂಲಕ ಖರೀದಿದಾರರು, ದಲ್ಲಾಳಿಗಳು ಪರಿಶೀಲಿಸಿ ದರ ನಮೂದು ಮಾಡಬಹುದು.
ತಕ್ಷಣವೇ ರೈತರ ದೂರವಾಣಿ ಸಂಖ್ಯೆಗೆ ದರ ಮಾಹಿತಿ ವಿವರ ರವಾನೆಯಾಗುತ್ತದೆ. ಅವರು ಒಪ್ಪಿಗೆ ಸೂಚಿಸಿದ ನಂತರ ಖರೀದಿ ನಡೆಯುತ್ತದೆ. ಖರೀದಿದಾರರು ರೈತರಿಗೆ ಪಾವತಿ ಮಾಡಬೇಕಾದ ಮೊತ್ತವನ್ನು ಸಂಬಂಧಿಸಿದ ಎಪಿಎಂಸಿ ಖಾತೆಗೆ ಮರು ದಿನ ಮುಂಜಾನೆ 11 ಗಂಟೆ ಒಳಗೆ ಜಮೆ ಮಾಡಬೇಕಾಗುತ್ತದೆ’ ಎಂದರು.
ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ, ಉಪಾಧ್ಯಕ್ಷರ ಅಜ್ಜಪ್ಪ ಹಿರೇಮನಿಪಾಟೀಲ, ಜಿ.ಪಂ.ಸದಸ್ಯ ಸಿದ್ದು ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.