ADVERTISEMENT

ಹೋರಾಟಕ್ಕೆ ಕೈ ಜೋಡಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 11 ಮೇ 2017, 6:49 IST
Last Updated 11 ಮೇ 2017, 6:49 IST
ನರಗುಂದದಲ್ಲಿ  ನಡೆಯುತ್ತಿರುವ ಮಹಾದಾಯಿ ಧರಣಿಯ 665ನೇ ದಿನವಾದ ಬುಧವಾರ ಮಹಾದಾಯಿ ಹೋರಾಟ ಸಮಿತಿ ಸದಸ್ಯ ಮಂಜುನಾಥ ಕುರಿ ಮಾತನಾಡಿದರು
ನರಗುಂದದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 665ನೇ ದಿನವಾದ ಬುಧವಾರ ಮಹಾದಾಯಿ ಹೋರಾಟ ಸಮಿತಿ ಸದಸ್ಯ ಮಂಜುನಾಥ ಕುರಿ ಮಾತನಾಡಿದರು   

ನರಗುಂದ: ರೈತರ ಬೇಡಿಕೆಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ. ರೈತರನ್ನು ರಾಜ­ಕಾರಣಿಗಳು ತಮ್ಮ ಇಷ್ಟಕ್ಕೆ ತಕ್ಕಂತೆ ಬಳಸಿಕೊಂಡು ಸ್ವಾರ್ಥ ಮೆರೆಯುತ್ತಿದ್ದಾರೆ. ಇದನ್ನು ತಡೆಯಬೇಕಾದರೆ ಯುವ ಸಮುದಾಯ ಸಂಘಟಿತರಾಗಿ ಮಹಾದಾಯಿಗೆ ಕೈ ಜೋಡಿಸುವಂತೆ ಮಹಾದಾಯಿ ಹೋರಾಟ ಸಮಿತಿ ಸದಸ್ಯ ಕೊಣ್ಣೂರಿನ ಮಂಜುನಾಥ ಕುರಿ ಸಲಹೆ ನೀಡಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹಾ­ದಾಯಿ ಧರಣಿಯ 665ನೇ ದಿನವಾದ ಬುಧವಾರ ಮಾತನಾಡಿದರು. ನ್ಯಾಯಮಂಡಳಿ ಸೂಚನೆ ಪಾಲನೆ ಮಾಡದೇ ರಾಜಕೀಯ ಪಕ್ಷಗಳು ರೈತರನ್ನು ಮೋಸಗೊಳಿಸುತ್ತಿವೆ ಎಂದರು.

ಮಹಾದಾಯಿ ವಿಷಯದಲ್ಲಿ ಗೋವಾ ರಾಜ್ಯಕ್ಕೆ ಮನ್ನಣೆ ಕೊಡುವ ಕಾಂಗ್ರೆಸ್‌ ಹಾಗೂ  ಬಿಜೆಪಿಗೆ ಕರ್ನಾಟಕ ರೈತರ ಹಿತ ಬೇಕಾಗಿಲ್ಲ. ತಮ್ಮ ಅಸ್ತಿತ್ವಕ್ಕೆ ರೈತರನ್ನು ಬಲಿ ಕೊಡಲು ಮುಂದಾಗಿರುವ ಎರಡು ಪಕ್ಷದ ನಾಯಕರಿಗೆ ಮುಂಬರುವ ಚುನಾವಣೆಯಲ್ಲಿ ಯುವ ಸಮುದಾಯ ಪಾಠ ಕಲಿಸಲು ಮುಂದಾಗಬೇಕು ಎಂದರು.

ADVERTISEMENT

ಹೋರಾಟ ಸಮಿತಿ ಸದಸ್ಯ ಜಗನ್ನಾಥ ಮುಧೋಳೆ ಮಾತನಾಡಿ,  ಒಂದೂವರೆ ವರ್ಷದಿಂದ ಹೋರಾಟ ನಡೆಸಿದರೂ ಈ  ಭಾಗದ ಸಂಸದರು, ಶಾಸಕರು ಇದಕ್ಕೆ ಸ್ಪಂದಿಸದೇ ಇರುವುದು ಯಕ್ಷಪ್ರಶ್ನೆಯಾಗಿದೆ. ಮತ ಪಡೆದ ಸೌಜನ್ಯಕ್ಕಾದರೂ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು. ಇಲ್ಲವಾದರೆ, ರೈತರು ಈ ಮೊದಲೇ ಹೇಳಿದ ಹಾಗೆ ಹೋರಾಟದ ರೂಪ ಬದಲಾಗುವುದು ನಿಶ್ಚಿತ ಎಂದರು.

ವೆಂಕಪ್ಪ ಹುಜರತ್ತಿ, ಚಂದ್ರಗೌಡ ಪಾಟೀಲ, ಎಸ್‌.ಬಿ. ಜೋಗಣ್ಣವರ, ಹನಮಂತ ಪಡೆಸೂರು, ಎಸ್‌.ಕೆ.ಗಿರಿಯಣ್ಣವರ, ಕೆ.ಎಚ್‌.ಮೊರಬದ, ಎಲ್‌.ಬಿ.ಮುನೇನಕೊಪ್ಪ, ವಾಸು ಚವ್ಹಾಣ, ಯಲ್ಲಪ್ಪ ಗುಡದೇರಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.