ಗದಗ: ಅಪಘಾತ ಸಂಭವಿಸಿದಾಗ, ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ವ್ಯಕ್ತಿಯ ಜೀವ ಉಳಿಸಲು ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಾಂತವ್ವ ದಂಡಿನ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ಐ.ಎಂ.ಎ ರಕ್ತನಿಧಿ ಕೇಂದ್ರ ಹಾಗೂ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಅಂಜುಮನ್ ಇಸ್ಲಾಂ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಅಪಘಾತ ಹಾಗೂ ಇತರೆ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ರಕ್ತ ದೊರೆಯದೆ ಎಷ್ಟೋ ಮಂದಿ ಮೃತಪಟ್ಟಿರುವ ಉದಾಹರಣೆಗಳು ಇವೆ. ರಕ್ತ ನೀಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಆರೋಗ್ಯವಂತ ವ್ಯಕ್ತಿ 45 ದಿನಕ್ಕೊಮ್ಮೆ ರಕ್ತ ದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಒಬ್ಬರ ಜೀವ ಉಳಿಸಿದ ನೆಮ್ಮದಿ ಜತೆಗೆ ಹಲವು ರೋಗಗಳನ್ನು ದೂರ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಿ.ಎಚ್.ಕಬಾಡಿ ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ತುರ್ತು ಸಮಯದಲ್ಲಿ ರಕ್ತ ದೊರೆತರೆ ಮತ್ತೊಬ್ಬರ ಜೀವ ಉಳಿಸಲು ಸಹಾಯವಾಗುತ್ತದೆ. ಪ್ರತಿಯೊಬ್ಬರೂ ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವಂತೆ ಕರೆ ನೀಡಿದರು.
ಐಎಂಎ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಆರ್.ಟಿ. ಪವಾಡಶೆಟ್ಟರ್ ಮಾತನಾಡಿ, 18 ರಿಂದ 65 ವರ್ಷದೊಳಗಿನವರು ವರ್ಷದಲ್ಲಿ ಮೂರು ಬಾರಿ ರಕ್ತದಾನ ಮಾಡಬಹುದು ಎಂದರು.
ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಮಾತನಾಡಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಲಲಿತಾ ಅಣ್ಣಿಗೇರಿ, ಉಪಾಧ್ಯಕ್ಷ ಭೀಮಪ್ಪ ಲಮಾಣಿ, ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಅಂಜುಮನ್ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಅಧ್ಯಕ್ಷ ಝಡ್ ಎ ಮುಜಾವರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಆರ್.ಎನ್.ಪಾಟೀಲ, ಜಿಲ್ಲಾ ಏಡ್ಸ್ ನಿಯಂತ್ರಣಾದಿಕಾರಿ ಡಾ. ಕೆ.ಆರುಂಧತಿ, ಪ್ರಾಚಾರ್ಯ ಎ.ಐ. ನಾಯಕ, ಡಾ. ನೀಲಗುಂದ, ಡಾ. ಪಲ್ಲೇದ ಹಾಜರಿದ್ದರು.
ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ ದತ್ತು ವೈಕುಂಠೆ ಹಾಗೂ ವಿಶ್ವನಾಥ ಯಳಮಲಿ ಅವರನ್ನು ಸನ್ಮಾನಿಸಲಾಯಿತು.
ಶಾಂತಶ್ರೀ ಅಂಗಡಿ ಪ್ರಾರ್ಥಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಬಿ ಹೊಸಮನಿ ಸ್ವಾಗತಿಸಿದರು. ಆರ್.ವಿ. ಕುಪ್ಪಸ್ತ ನಿರೂಪಿಸಿದರು. ಬಸವರಾಜ ಲಾಳಗಟ್ಟಿ ವಂದಿಸಿದರು.
ಇದಕ್ಕೂ ಮುನ್ನ ನಗರದ ಮುನ್ಸಿಪಲ್ ಕಾಲೇಜು ಆವರಣದಿಂದ ಆರಂಭಗೊಂಡ ಜನಜಾಗೃತಿ ಜಾಥಾಕ್ಕೆ ಡಾ. ಪಿ.ಎಚ್. ಕಬಾಡಿ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಆರ್.ಎನ್.ಪಾಟೀಲ ಚಾಲನೆ ನೀಡಿದರು. ಬಾಬಣ್ಣ ಒಂಟಕುದುರಿ, ಅಜಯ ಕಲಾಲ, ಎಂ.ಡಿ. ವೀರಾಪುರ, ರವಿ ಪತ್ತಾರ, ಅಶೋಕ ಕೊಳವಾಡ, ಎ.ಕೆ. ಭಾಗವಾನ್, ಚನ್ನಮ್ಮ ಭಾಗ್ಯ ಪಾಟೀಲ, ಸುಮಾ ಸಾವಿತ್ರ ಕುಂಬಾರ, ಬಾಪುರೆ , ಹೊನ್ನಗುಡಿ, ಗಂಗಾಧರ, ನಿರ್ಮಲಾ , ಪ್ರತಿಭಾ, ರೇಶ್ಮಾ , ಸಂಜಯ, ಪ್ರಕಾಶ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.