ಹಾಸನ: ವಾರದ ಹಿಂದೆ ಮಾರುಕಟ್ಟೆಯಲ್ಲಿ ಕೆ.ಜಿ. ₹ 40ಕ್ಕೆ ಮಾರಾಟ ಆಗುತ್ತಿದ್ದ ಈರುಳ್ಳಿ, ಈ ವಾರ ₹ 60ಕ್ಕೆ ಏರಿದೆ. ₹ 20 ಹೆಚ್ಚಳವಾಗಿದೆ. ಈರುಳ್ಳಿ ನಿತ್ಯ ಬಳಕೆಯ ಪದಾರ್ಥವಾಗಿದ್ದು, ಹಬ್ಬ, ಮದುವೆ ಹಾಗೂ ಇತರೆ ಕಾರ್ಯಗಳಿಗೆ ಹೆಚ್ಚು ಬಳಸಲಾಗುತ್ತದೆ. ಬೆಲೆ ಹೆಚ್ಚಳದಿಂದ ಸಾರ್ವಜನಿಕರು ಈರುಳ್ಳಿ ಕೊಳ್ಳುವ ಮುನ್ನ ಯೋಚಿಸುವಂತಾಗಿದೆ.
‘ಹಾಸನದ ಮಾರುಕಟ್ಟೆಗೆ ಚಿತ್ರದುರ್ಗ, ಹುಬ್ಬಳ್ಳಿ, ಚಳ್ಳಕೆರೆಯಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತದೆ. ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಈರುಳ್ಳಿ ಬರುತ್ತಿರುವ ಕಾರಣ ಬೆಲೆ ಏರಿಕೆಯಾಗಿದೆ’ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿ ಮಂಜುನಾಥ್.
ಉಳಿದಂತೆ ಇತರೆ ತರಕಾರಿಗಳ ದರದಲ್ಲಿ ಅಲ್ಪ ಏರಿಕೆ ಮತ್ತು ಇಳಿಕೆ ಆಗಿದೆ. ಬೀನ್ಸ್ ಕೆ.ಜಿ.ಗೆ ₹ 40, ಆಲೂಗೆಡ್ಡೆ ₹ 20, ಕ್ಯಾರೆಟ್ ₹ 80, ಹಾಗಲಕಾಯಿ ₹ 40, ದಪ್ಪ ಮೆಣಸಿನ ಕಾಯಿ ₹ 60, ಟೊಮೆಟೊ ₹ 30, ಅವರೆ ಕಾಯಿ ₹ 40, ನುಗ್ಗೆಕಾಯಿ ₹ 100 ರಂತೆ ಮಾರಾಟವಾದರೆ, ಕೊತ್ತಂಬರಿ 3 ಕಂತೆಗೆ ₹ 10, ಪಾಲಾಕ್, ಲಾಳಿ ಮತ್ತು ದಂಟು ಸೊಪ್ಪು ₹ 10ಕ್ಕೆ 4 ಕಂತೆಯಂತೆ ಮಾರಾಟ ಮಾಡಲಾಗುತ್ತಿದೆ.
ಹಣ್ಣುಗಳ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಸೇಬು ಕೆ.ಜಿ ಗೆ ₹ 100, ಬಾಳೆಹಣ್ಣು ₹ 60, ದಾಳಿಂಬೆ ₹ 100, ಸೀತಾಫಲ ₹ 100, ಮೂಸಂಬಿ ಹಣ್ಣು ₹ 80, ಅನಾನಸ್ ₹ 50, ದ್ರಾಕ್ಷಿ ₹ 180, ಪಪ್ಪಾಯ ಮತ್ತು ಕಲ್ಲಂಗಡಿ ಹಣ್ಣು ₹ 30, ಸಪೋಟ ಕೆ.ಜಿ.ಗೆ 100ಕ್ಕೆ ಲಭ್ಯ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.