ADVERTISEMENT

ಕಿತ್ತನಕೆರೆ: ಕರಿಯಮ್ಮ ದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 5:53 IST
Last Updated 15 ಏಪ್ರಿಲ್ 2017, 5:53 IST

ಅರಸೀಕೆರೆ: ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಕಿತ್ತನಕೆರೆ ಗ್ರಾಮ ದೇವತೆ ಕರಿಯಮ್ಮ ದೇವಿ ಹಾಗೂ ಆಂಜನೇಯ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಡಗರ ಸಂಭ್ರಮದ ಮಧ್ಯೆ ಶುಕ್ರವಾರ ನಡೆಯಿತು.

ಕರಿಯಮ್ಮ ದೇವಿ ಮೂಲ ಸನ್ನಿಧಿ ಹಾಗೂ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ದೋಣನಕಟ್ಟೆ, ಕಡಲಮಗೆ, ಕೆ.ಶಂಕರನಹಳ್ಳಿ, ಪಾಳ್ಯ, ಬೆಣ್ಣಿಗುಂಡಿಹಳ್ಳಿ, ಕುಂಬಾರಗಟ್ಟೆ, ಮದ್ದರಹಳ್ಳಿ, ಪಿ.ಹೊಸಹಳ್ಳಿ ಮಾಡಾಳು ಸೇರಿದಂತೆ ಸುತ್ತಮುತ್ತಲ ಹನ್ನೆರಡು ಹಳ್ಳಿಗಳ ಗ್ರಾಮಸ್ಥರು ಹಾಗೂ ವಿವಿಧೆಡೆಯ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ಕರಿಯಮ್ಮ ದೇವಿಯನ್ನು ಪುಷ್ಪಾಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಆಂಜನೇಯ ಸ್ವಾಮಿ ಹಾಗೂ ಚೌಡೇಶ್ವರಿ ದೇವಿ ಸಮ್ಮುಖದಲ್ಲಿ ದೇವಾಲಯ ಆವರಣದಿಂದ ವಾದ್ಯಮೇಳಗಳೊಂದಿಗೆ ರಥ ಮಂಟಪಕ್ಕೆ ಉತ್ಸವದಲ್ಲಿ ಕರೆತರಲಾಯಿತು.

ADVERTISEMENT

ಚೌಡೇಶ್ವರಿ ದೇವಿ ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆದು ಮಹಾ ಮಂಗಳಾರತಿ ಸಲ್ಲಿಸುತ್ತಿದ್ದಂತೆ ಭಕ್ತರು ರಥ ಎಳೆದರು.ರಥ ಮುಂದಕ್ಕೆ ಚಲಿಸುತ್ತಿದ್ದಂತೆ ಭಕ್ತರು ರಥದ ಕಲಶಕ್ಕೆ ಬಾಳೆಹಣ್ಣು, ದವನ ತೂರಿ ಭಕ್ತಿ ಸಮರ್ಪಿಸಿದರು. ರಥೋತ್ಸವಕ್ಕೆ ಬಂದ ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ಗ್ರಾಮಸ್ಥರು ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.