ADVERTISEMENT

ಚೆಕ್ ಪೋಸ್ಟ್ ಕಾರ್ಯನಿರ್ವಹಣೆ ಪರಿಶೀಲಿಸಿದ ಡಿ.ಸಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 9:26 IST
Last Updated 23 ಏಪ್ರಿಲ್ 2018, 9:26 IST

ಹಾಸನ: ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಬೇಲೂರು ವಿಧಾನಸಭಾ ಕ್ಷೇತ್ರದ 4 ಮತಗಟ್ಟೆಗಳಿಗೆ ಭೇಟಿ ನೀಡಿ ಸ್ಥಳೀಯರಿಗೆ ಮತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಸ್ಥಳೀಯರ ಅಭಿಪ್ರಾಯ ಆಲಿಸಿದರು.

ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಸಮಸ್ಯಾತ್ಮಕ ಎಂದು 5 ಅತಿ ಮತಗಟ್ಟೆ ಗುರುತಿಸಲಾಗಿದೆ. ಅದರಲ್ಲಿ ಅಂಗಡಿಹಳ್ಳಿ ಹಾಗೂ ಹಗರೆ ಗ್ರಾಮದ ತಲಾ 2 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾರರನ್ನು ಭೇಟಿಯಾದ ಜಿಲ್ಲಾಧಿಕಾರಿ, ಸ್ಥಳೀಯರಲ್ಲಿ ವಿಶ್ವಾಸ ಮೂಡಿಸುವ ಚಟುವಟಿಕೆಯಲ್ಲಿ ತೊಡಗುವುದರ ಜತೆಗೆ ಮುಕ್ತ ಚರ್ಚೆ ನಡೆಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆ ಮಹತ್ವವಾಗಿದೆ. ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಬಹುಮುಖ್ಯ. ಎಲ್ಲರು ಸ್ವಯಂ ಪ್ರೇರಿತರಾಗಿ ಮತದಾನ ಮಾಡಬೇಕು. ಶಾಂತಿಯುತ, ನಿಷ್ಪಕ್ಷಪಾತ ಚುನಾವಣೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ಹಗರೆ ಹಾಗೂ ವಿಜಯನಗರ ಬಳಿ ಚೆಕ್‌ಪೋಸ್ಟ್‌ಗಳ ಕಾರ್ಯ ನಿರ್ವಹಣೆ ಬಗ್ಗೆ ಪರಿಶೀಲಿಸಿದರು. ಎಲ್ಲಾ ಸಂಶಯಾತ್ಮಕ ವಾಹನಗಳ ತೀವ್ರ ತಪಾಸಣೆಗೆ ಒಳಪಡಿಸಿ ಗೂಡ್ಸ್ ವಾಹನ, ಲಾರಿ ಸೂಕ್ಷ್ಮವಾಗಿ ಗಮನಿಸುವಂತೆ ಪೊಲೀಸ್‌ ಸಿಬ್ಬಂದಿಗೆ ಸೂಚನೆ ನೀಡಿದರು.

ತಪಾಸಣೆ ನೆಪದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಆಗಬಾರದು. ಆದರೆ, ಅಕ್ರಮಗಳಿಗೆ ಆಸ್ಪದ ಇರಬಾರದು. ಹಾಗಾಗಿ ಎಲ್ಲಾ ವಾಹನಗಳನ್ನು ಪರಿಶೀಲಿಸಿ ಅನುಮಾನಸ್ಪದ ವಾಹನಗಳನ್ನು ಹೆಚ್ಚಿನ ತಪಾಸಣೆಗೆ ಗುರಿಪಡಿಸಿ ಎಂದರು.

ಬೇಲೂರು ತಹಶೀಲ್ದಾರ್ ಉಮೇಶ್, ಡಿವೈಎಸ್ಪಿ ಸದಾನಂದ ಹಳೇಬೀಡು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ವಿಜಯಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.