ADVERTISEMENT

ಜಲ ಮೂಲಗಳ ಒತ್ತುವರಿ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2017, 8:52 IST
Last Updated 13 ಜೂನ್ 2017, 8:52 IST

ಹಾಸನ: ‘ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಹೊಸಹಳ್ಳಿ ಹಾಗೂ ಕಿತ್ತನಕೆರೆ ಗ್ರಾಮಗಳ ಕೆರೆ, ಕಟ್ಟೆ ಹಾಗೂ ರಾಜ ಕಾಲುವೆಯಲ್ಲಿ ಮಾಡಿರುವ ಒತ್ತುವರಿ ತೆರೆವುಗೊಳಿಸುವಂತೆ ಆಗ್ರಹಿಸಿ ಹೊಸಹಳ್ಳಿ ಗ್ರಾಮದ ಗಂಗಾಧರಪ್ಪ ಮತ್ತು ರವಿಶಂಕರ್‌ ಜಿಲ್ಲಾಧಿಕಾರಿ ಕಚೇರಿ ಮುಂದೆ ಗಾಂಧೀಜಿ ಭಾವಚಿತ್ರವಿಟ್ಟು ಸೋಮವಾರ ಪ್ರತಿಭಟನೆ ನಡೆಸಿದರು.

ನೀರಿನ ಮೂಲಗಳು ಪ್ರಭಾವಿಗಳ ಪಾಲಾಗುತ್ತಿದ್ದು, ಇದರಿಂದ ಜನ, ಜಾನುವಾರುಗಳು ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ ಎಂದು ತುಂತುರು ಮಳೆಯಲ್ಲೇ ಕೊಡೆ ಹಿಡಿದು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.

ಎರಡು ಗ್ರಾಮಗಳ ಕೆರೆ, ಕಟ್ಟೆ ಹಾಗೂ ರಾಜ ಕಾಲುವೆಗಳು ಒತ್ತುವರಿಯಾಗಿರುವ ಬಗ್ಗೆ ಹಲವು ವರ್ಷಗಳಿಂದ ಜಿಲ್ಲಾಡಳಿತಕ್ಕೆ ದೂರು ನೀಡಲಾಗಿದೆ. ಆದರೆ, ಇದುವರೆಗೂ ಒತ್ತುವರಿ ಜಾಗ ತೆರವುಗೊಳಿಸಿಲ್ಲ. ಕೆರೆ ಅಂಗಳ ಒತ್ತುವರಿ ಮಾಡಿರುವುದರಿಂದ ಈ ಸುತ್ತಲಿನ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಜಾನುವಾರುಗಳ ಮೇವು ಮತ್ತು ಕುಡಿಯುವ ನೀರಿಗೂ ಬರ ಬಂದಿದೆ. ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರು ಒತ್ತುವರಿದಾರರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಅವರಿಗೆ  ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಈಗಾಗಲೇ ಜಿಲ್ಲೆಯಲ್ಲಿ ಉತ್ತಮ ಮುಂಗಾರು ಪ್ರಾರಂಭವಾಗಿದೆ. ಕೆರೆ, ಕಟ್ಟೆ  ಒತ್ತುವರಿ ಆಗಿರುವುದರಿಂದ ಮಳೆ ನೀರು ಸಂಗ್ರಹಕ್ಕೆ ಸಮಸ್ಯೆಯಾಗಿದೆ. ತಾಲ್ಲೂಕಿನ ಕಿತ್ತನಕೆರೆ ಗ್ರಾಮದ ಸರ್ವೆ ನಂ 114/1 ಕಟ್ಟೆ , ಹೊಸಹಳ್ಳಿ ಗ್ರಾಮ ಸರ್ವೆ ನಂ 42 ಗೋಕಟ್ಟೆ , ಸರ್ವೆ ನಂ 39 ರ ಕೆರೆ, ಸರ್ವೆ ನಂ 53 ಸಿದ್ದಪ್ಪ ಕಟ್ಟೆಗೆ ಲೋಕೋಪಯೋಗಿ ರಸ್ತೆಯಿಂದ ಸೇತುವೆ ಮಾಡಿ ಮೊದಲು ಬರುತ್ತಿದ್ದ ನೀರನ್ನು ಸಂಗ್ರಹ ಮಾಡಲು ಮತ್ತೆ ವ್ಯವಸ್ಥೆ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.

ಸರ್ವೆ ನಂ 27ರಲ್ಲಿರುವ ಎರಡು ಕಟ್ಟೆ ಹಾಗೂ ದಿಬ್ಬೂರು ಗ್ರಾಮದ ಸರ್ವೆ ನಂ 157 ಗೌಡನಕಟ್ಟೆ ಒತ್ತುವರಿಯಾಗಿದೆ.  ಇವುಗಳ ಬಗ್ಗೆ ಈಗಾಗಲೇ      ಜಿಲ್ಲಾಡಳಿತಕ್ಕೆ ದೂರು ನೀಡಿದ್ದರೂ ಒತ್ತುವರಿ ಜಾಗ ತೆರವುಗೊಳಿಸಿಲ್ಲ. ಇನ್ನಾದರೂ ಅಧಿಕಾರಿಗಳು ಒತ್ತುವರಿ ತೆರವಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.