ಹೊಳೆನರಸೀಪುರ: ಪಟ್ಟಣದ ಸೀತಾವಿಲಾಸ ರಸ್ತೆಯಲ್ಲಿ ನಿರ್ಮಿಸಿರುವ ಮೈಲಾರಲಿಂಗೇಶ್ವರ ಸ್ವಾಮಿಯ ದೇವಾಲಯದ ಕಟ್ಟಡ ಹಾಗೂ ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ದೇವರ ಪ್ರತಿಷ್ಠಾಪನೆ, ರುದ್ರಹೋಮ, ಚಿತ್ಕಲಾ ಹೋಮ, ಬ್ರಹ್ಮಾನಂದ ಬಿಕ್ಷು ಸ್ವಾಮೀಜಿಯಿಂದ ಕಳಶಾಭಿಷೇಕ, ಮಂಗಳಾರತಿ ನಡೆದವು.
ವೆಂಕಪಯ್ಯ ಒಡೆಯರ್ ಮಾತನಾಡಿ, ‘ಜನರು ಗುಡಿಗೆ ಹೋಗಿ ದೇವರನ್ನು ಕಾಣಬಯಸುತ್ತಾರೆ. ದೇವಾಲಯ ನಿರ್ಮಾಣ ಮಾಡಿದ ನಂತರ ಆ ದೇವಾಲಯದಲ್ಲಿ ನಿತ್ಯ ಪೂಜೆ, ಪ್ರಸಾದ ವಿನಿಯೋಗಗಳು ನಡೆಯಬೇಕು. ಜಾತ್ರೆ ಯಾತ್ರೆಗಳು ನಡೆಯಬೇಕು. ಇಂತಹ ಕಾರ್ಯಗಳಿಂದ ಜನರ ನಡುವಿನ ಬಾಂಧವ್ಯ ಹೆಚ್ಚುತ್ತದೆ’ ಎಂದು ಹೇಳಿದರು.
ಬ್ರಹ್ಮಾನಂದ ಬಿಕ್ಷು ಸ್ವಾಮೀಜಿ ಮಾತನಾಡಿ, ಅಧ್ಯಾತ್ಮ ಕಾರ್ಯದಲ್ಲಿ ಮನಪೂರ್ವಕವಾಗಿ ತೊಡಗಿಕೊಳ್ಳು ವವರು ಸದಾ ಸಮಾಜದ ಒಳಿತಿನ ಬಗ್ಗೆ ಚಿಂತಿಸುವವರಾಗಿರುತ್ತಾರೆ. ದೇವರು ಎಂಬ ನಂಬಿಕೆ ನಮ್ಮನ್ನು ಸರಿದಾರಿಯಲ್ಲಿ ನಡೆಸುತ್ತದೆ ಎಂದರು.
ಮೇಲುಕೋಟೆಯ ಸಂಸ್ಕೃತ ಕಾಲೇಜಿನ ವೇದ ಸಹಾಯಕ ಪ್ರಾಧ್ಯಾಪಕ ದತ್ತಾತ್ರೇಯ ಭಟ್ಟ ತಂಡದವರ ಪೌರೋಹಿತ್ಯದಲ್ಲಿ ದೇವಾಲಯದ ಉದ್ಘಾಟನೆ ಮತ್ತು ದೇವರ ಪುನರ್ ಪ್ರತಿಷ್ಠಾಪನೆ ಕಾರ್ಯಗಳು ನಡೆದವು.
ಮೈಲಾರಲಿಂಗೇಶ್ವರ ಭಕ್ತ ಮಂಡಳಿಯ ಅಧ್ಯಕ್ಷ ಟಿ.ಶಿವಕುಮಾರ್, ಪುರಸಭಾಧ್ಯಕ್ಷ ಎಚ್.ವಿ.ಪುಟ್ಟರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಆರ್.ರವಿ ಕುಮಾರ್, ಸದಸ್ಯೆ ಕೆ.ಆರ್.ಸುಬ್ರಹ್ಮಣ್ಯ, ಕಾರ್ಯದರ್ಶಿ ಬಾ.ರಾ.ಸುಬ್ಬರಾಯ, ಗಣೇಶ್, ಅರ್ಚಕ ಸುಕುಮಾರ್, ಕೆ.ಎ.ರಾಜೇಗೌಡ, ಅರ್ಚಕ ಜಯರಾಂ, ಆರ್.ಬಿ.ಪುಟ್ಟೇಗೌಡ, ಪುರಸಭಾ ಸದಸ್ಯ ಕೆ.ಆರ್.ಸುಬ್ರಹ್ಮಣ್ಯ, ಗುಂಜೇವು ಶಿವಣ್ಣ, ಮಲ್ಲಿಕಾರ್ಜುನ್, ದೊಡ್ಡಮಲ್ಲೇಗೌಡ, ಸುಧಾನಳಿನಿ, ಮಂಜುಳಾ, ಶ್ರೀಕಂಠ ಪ್ರತಿಷ್ಠಾಪನಾ ಕಾರ್ಯದ ನೇತೃತ್ವ ವಹಿಸಿದ್ದರು.
ದೇವಾಲಯದ ಉದ್ಘಾಟನೆ ಮತ್ತು ಪ್ರತಿಷ್ಠಾನೆಗೆ ಬಂದ ಸಾವಿರಾರು ಭಕ್ತರಿಗೆ ಸಿಹಿ ಪುಂಗಲ್, ಮೊಸರನ್ನವನ್ನು ಕದಂಬ ಪ್ರಸಾದ್ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.