ಹಾಸನ: ಸೊಳ್ಳೆಗಳ ಉತ್ಪತ್ತಿ ಮಾಡುವ ಲಾರ್ವಾ ಬೆಳೆಯದಂತೆ ಎಚ್ಚರವಹಿಸುವ ಮೂಲಕ ಡೆಂಗಿ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಎಚ್.ಎಸ್.ಪ್ರಕಾಶ್ ಮನವಿ ಮಾಡಿದರು.
ನಗರಸಭೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಜೂನ್ 17ರಿಂದ 20 ರ ವರೆಗೂ ನಗರದಾದ್ಯಂತ ಹಮ್ಮಿಕೊಂಡಿರುವ ಲಾರ್ವಾ ನಾಶ ಅಭಿಯಾನದಲ್ಲಿ ಮಾತನಾಡಿದರು.
ಮನೆಯ ಸುತ್ತಮುತ್ತ ಸ್ವಚ್ಚತೆ ಕಾಪಾಡುವುದರ ಜೊತೆಗೆ ಹಳೇಯ ಟೈರು, ತೆಂಗಿನ ಕೊರಟ ಮತ್ತಿತರ ಬೇಡದ ಪದಾರ್ಥಗಳಲ್ಲಿ ನೀರು ನಿಲ್ಲದಂತೆ ನಿಗಾವಹಿಸುವಂತೆ ತಿಳಿಸಿದರು.
ಸರ್ವೆಗೆ ನಗರಸಭೆ ವತಿಯಿಂದ ₹ 4.22ಲಕ್ಷ ಅನುದಾನವನ್ನು ಆರೋಗ್ಯ ಇಲಾಖೆಗೆ ಬಿಡುಗಡೆ ಮಾಡಲಾಗಿದ್ದು, ನರ್ಸಿಂಗ್ ಕಾಲೇಜು, ಎನ್. ಡಿ. ಆರ್. ಕೆ. ಹಾಗೂ ಎ. ಎನ್.ಎಂ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳ ಮುಖಾಂತರ ನಗರದಾದ್ಯಂತ ಲಾರ್ವಾ ಸರ್ವೆ ನಡೆಸಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ಎಚ್.ಎಸ್.ಅನಿಲ್ ಕುಮಾರ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ಸರ್ವೆಗೆ 300 ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ 30 ಆರೋಗ್ಯ ಸಹಾಯಕರನ್ನು ಮೇಲ್ವಿಚಾರಣೆಗೆ ನೇಮಿಸಲಾಗಿದೆ ಎಂದರು.
ನರ್ಸಿಂಗ್ ವಿದ್ಯಾರ್ಥಿಗಳು ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಮತ್ತು ಡೆಂಗಿ ನಿಯಂತ್ರಣ ಬಗ್ಗೆ ಸಾರ್ವಜನಿಕರಿಗೆ ಕರಪತ್ರ ವಿತರಿಸುವ ಮೂಲಕ ಮಾಹಿತಿ ನೀಡಲಿದ್ದಾರೆ.
ಪ್ರತಿ ಮನೆಯಲ್ಲಿ ಲಾರ್ವಾ ಬ್ರೀಡಿಂಗ್ ಬಗ್ಗೆ ಸರ್ವೆ ಕೈಗೊಳ್ಳುತ್ತಿದ್ದಾರೆ ಎಂದು ವಿವರಿಸಿದರು. ನಗರಸಭೆ ಸದಸ್ಯರು, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಎಂಟಮಾಲಾಜಿಸ್ಟ್ ನಗರಸಭೆ ಆಯುಕ್ತ, ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.