ADVERTISEMENT

ದಲಿತ ಹೆಣ್ಮಕ್ಕಳ ಮೇಲೆ ನಿಲ್ಲದ ದೌರ್ಜನ್ಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 9:37 IST
Last Updated 29 ಡಿಸೆಂಬರ್ 2017, 9:37 IST

ಹಾಸನ : ದಲಿತ ನೌಕರರು ಕೇವಲ ತಮ್ಮ ಕುಟುಂಬದ ಅಭಿವೃದ್ಧಿಗೆ ಸೀಮಿತವಾಗದೆ ದುರ್ಬಲ ದಲಿತರನ್ನು ಮೇಲೆತ್ತಲು ಸಹಕರಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಮನವಿ ಮಾಡಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬಿ.ಆರ್. ಅಂಬೇಡ್ಕರ್ ಅವರ 62ನೇ ಪರಿನಿರ್ವಾಣದ ಅಂಗವಾಗಿ ಏರ್ಪಡಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೈಸೂರು ವಿಭಾಗ ಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ, ಹಲ್ಲೆ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಮೀಸಲಾತಿ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾದವರು ದುರ್ಬಲ ದಲಿತರನ್ನು ಗುರುತಿಸಿ ಮೇಲೆತ್ತುವ ಕೆಲಸ ಮಾಡಬೇಕಿದೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಎಲ್ಲಾ ಅನುದಾನವನ್ನು ಖರ್ಚು ಮಾಡುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಂಘಟನಾ ಸಂಚಾಲಕ ಮರೀಶ್ ನಾಗಣ್ಣ ಮಾತನಾಡಿ, ಎಲ್ಲಾ ಪಕ್ಷಗಳ ರಾಜಕಾರಣಿಗಳು ದಲಿತರ ಮತ ಪಡೆಯಲು ಭರವಸೆಗಳ ಸುರಿಮಳೆ ಸುರಿಸುತ್ತಾರೆ. ಅಧಿಕಾರಕ್ಕೆ ಬಂದ ನಂತರ ನೀಡಿದ ಭರವಸೆ ಈಡೇರಿಸದೆ ವಂಚನೆ ಮಾಡುವುದರಲ್ಲೇ ಕಾಲಹರಣ ಮಾಡುತ್ತಾರೆ ಎಂದು ದೂರಿದರು.

ಭೂಮಿ ಹೋರಾಟ, ಜೀತ ಪದ್ಧತಿ ಮತ್ತು ದೇವದಾಸಿ ಪದ್ಧತಿ ನಿರ್ಮೂಲನೆ, ದೌರ್ಜನ್ಯಗಳ ತಡೆಗಾಗಿ ದಲಿತ ಸಂಘರ್ಷ ಸಮಿತಿ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ ಎಂದು ಹೇಳಿದರು.

ವಿಭಾಗೀಯ ಸಂಘಟನಾ ಸಂಚಾಲಕ ಬಿ.ಎನ್. ಗಂಗಾಧರಪ್ಪ ಮಾತನಾಡಿ, ದಲಿತ ಸಂಘರ್ಷ ಸಮಿತಿ ಇಂದು ಹತ್ತಾರು ಸಂಘಟನೆಗಳಾಗಿ ಇಬ್ಬಾಗವಾಗಿದೆ. ದಲಿತರೆಲ್ಲರೂ ಒಂದಾಗಬೇಕು ಎಂದು ಹೇಳುವ ಸರ್ಕಾರ, ದಲಿತರನ್ನು ದಿಕ್ಕು ತಪ್ಪಿಸುವ ಮೂಲಕ ಅತಂತ್ರ ಸ್ಥಿತಿಗೆ ತಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಖಂಡ ಸತ್ಯ ಭದ್ರವತಿ ಮಾತನಾಡಿ, ಸಮಾಜವನ್ನು ಜಾತಿ, ಧರ್ಮಗಳ ಹೆಸರಿನಲ್ಲಿ ವಿಂಗಡಣೆ ಮಾಡುತ್ತಿರುವುದು ಉತ್ತಮ ಬೆಳೆವಣಿಗೆಯಲ್ಲ. ಪ್ರೊ. ಬಿ. ಕೃಷ್ಣಪ್ಪ ಮತ್ತು ಚಂದ್ರ ಪ್ರಸಾದ್ ತ್ಯಾಗಿ ಎಲ್ಲಾ ಜಾತಿಗಳನ್ನು ಒಗ್ಗೂಡಿಸಿ ಪ್ರಬಲ ಸಂಘಟನೆ ಕಟ್ಟಿದರು. ಇಂದು ಜಾತಿಗೊಂದು ಸಂಘಟನೆ ಕಟ್ಟಿರುವುದು ಒಳ್ಳೆಯದಲ್ಲ ಎಂದು ನುಡಿದರು.

ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್, ಜಿಲ್ಲಾ ಸಂಚಾಲಕ ಎಸ್.ಎನ್. ಮಲ್ಲಪ್ಪ, ಮೈಸೂರಿನ ಕಾಂತರಾಜು, ಚಿಕ್ಕಮಗಳೂರಿನ ವಸಂತಕುಮಾರ್, ಮಂಗಳೂರಿನ ಲಕ್ಷ್ಮಣ್, ಎಂ.ವಿ. ಪದ್ಮನಾಭ್, ಉಡುಪಿಯ ಆನಂದ್, ಮಂಡ್ಯದ ನಂಜುಂಡ ಮೌರ್ಯ, ಕೊಡಗಿನ ಗಾಯಿತ್ರಿ ನರಸಿಂಹ, ವಿಭಾಗೀಯ ಸಂಚಾಲಕ ಶೇಖರ್ ಹೆಜಮಾಡಿ, ತರೀಕೆರೆ ಎನ್. ವೆಂಕಟೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.