ಅರಸೀಕೆರೆ: ತಾಲ್ಲೂಕಿನ ಮಾಡಾಳು ದಾಖ್ಲೆ ಸೀತಾಪುರ–ಕೊಪ್ಪಲು ಗ್ರಾಮದಲ್ಲಿ ಜೀರ್ಣೋದ್ಧಾರವಾದ ಪಂಚಲಿಂಗೇಶ್ವರ ಸ್ವಾಮಿ ದೇವಾಲಯ ಉದ್ಘಾಟನೆ, ಪಂಚಲಿಂಗೇಶ್ವರಸ್ವಾಮಿ ಬೆಳ್ಳಿಮುಖ, ಪದ್ಮ, ವಿಗ್ರಹ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ಜರುಗಿತು.
ಭಾನುವಾರ ಬ್ರಾಹ್ಮಿ ಮುಹೂರ್ತ ದಲ್ಲಿ ಮಹಿಳೆಯರಿಂದ ಗಂಗಾಪೂಜೆ, ವಿವಿಧ ದೇವರು ಸಮ್ಮುಖದಲ್ಲಿ ಹೊಸಹಳ್ಳಿ ಸಿದ್ದಪ್ಪ ಶಾಸ್ತ್ರಿ ತಂಡದವರ ಪೌರೋಹಿತ್ಯದಲ್ಲಿ ಪುಣ್ಯಾಹ, ಗಣಪತಿ ಪೂಜೆ, ಪಂಚಕಳಶ ಸ್ಥಾಪನೆ, ನವಗ್ರಹ ಪೂಜೆ, ಮೃತ್ಯುಂಜಯ ರುದ್ರ, ಉಮಾ ಮಹೇಶ್ವರ ಮಂಡಲಪೂಜೆ ರುದ್ರ ಹೋಮ ನಡೆದವು.
ಶನಿವಾರ ಸಂಜೆ ಕಿತ್ತನಕೆರೆ ಗ್ರಾಮದ ದೊಡ್ಡಮ್ಮ ಹಾಗೂ ಕರಿಯಮ್ಮದೇವಿ, ಚೌಡೇಶ್ವರಿ, ಮಾಡಾಳಿನ ತಿರುಮಲೇಶ್ವರ ಸ್ವಾಮಿಗೊಲ್ಲರಹಟ್ಟಿ ನರಸಿಂಹಸ್ವಾಮಿ, ಕೊಪ್ಪಲು ಗ್ರಾಮದ ನಂಜುಂಡೇಶ್ವರ ಸ್ವಾಮಿ ಇತರೆ ಗ್ರಾಮಗಳ ದೇವರ ಕೂಡು ಭೇಟಿಯ ನಂತರ ಮಂಗಲ ವಾದ್ಯ ಗಳೊಂದಿಗೆ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಕರೆತರಲಾಯಿತು.
ಮನಶಾಂತಿಗೆ ಶ್ರದ್ಧೆ ಮುಖ್ಯ: ಧಾರ್ಮಿಕ ಸಭೆಯಲ್ಲಿ ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ಈಗ ಮಾನವೀಯ ಮೌಲ್ಯ ಪುನರುತ್ಥಾನಗೊಳ್ಳಬೇಕಿದೆ. ಶ್ರದ್ಧೆ, ನಿಷ್ಠೆಯಿಲ್ಲದ ಜೀವನ ಅಶಾಂತಿಗೆ ಕಾರಣವಾಗಿದೆ. ಭೌತಿಕ ಬದುಕಿನ ಶ್ರೇಯಸ್ಸಿಗೆ ಅಧ್ಯಾತ್ಮದ ಬೆಳಕಿನ ಅವಶ್ಯಕತೆ ಇದೆ ಎಂದರು.
ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ ಶಿವಾಚಾರ್ಯ ಸ್ವಾಮೀಜಿ ದೇಗುಲ ಜೀರ್ಣೋದ್ಧಾರ ಎಷ್ಟು ಮುಖ್ಯವೊ ಅಲ್ಲಿ ಶಿಸ್ತುಬದ್ಧವಾಗಿ ಧಾರ್ಮಿಕ ಚಟುವಟಿಕೆ ನಡೆಸುವುದು ಅಷ್ಟೇ ಮುಖ್ಯವಾಗಿದೆ ಎಂದರು.
ಶಿವಬಸವ ಕುಮಾರಾಶ್ರಮದ ಅಭಿನವ ಶಿವಲಿಂಗ ಸ್ವಾಮೀಜಿ, ಡಿ.ಎಂ.ಕುರ್ಕೆ ಬೂದಿಹಾಲ್ ವಿರಕ್ತ ಮಠದ ಉತ್ತರಾಧಿಕಾರಿ ಶಶಿದೇವರ ಮೂರ್ತಿ, ಜಿ.ಪಂ. ಸದಸ್ಯ ಮಾಡಾಳು ಎಂ.ಎಸ್.ವಿ.ಸ್ವಾಮಿ, ತಾ.ಪಂ ಸದಸ್ಯೆ ವನಜಾ ಪ್ರಕಾಶಮೂರ್ತಿ, ಗ್ರಾ.ಪಂ ಅಧ್ಯಕ್ಷ ಎಂ.ಈ.ಚಂದ್ರಶೇಖರ್, ಆರ್. ಬಸವರಾಜ್, ಗುಡಿಗೌಡರಾದ ಓಂಕಾರ ಮೂರ್ತಿ, ಶಿವಕುಮಾರ್, ಮುಖಂಡ ರಾದ ಎಸ್.ಪಿ. ಮಲ್ಲಿಕಾರ್ಜುನಪ್ಪ, ಜಯಪ್ಪ, ಎಸ್.ಸಿ.ಕೊಟ್ಟೂರಪ್ಪ, ಎಂ.ಬಿ.ಕೊಟ್ಟೂರಪ್ಪ, ಬಿಜೆಪಿ ಮುಖಂಡ ಎಂ.ಸಿ. ನಟರಾಜ್ ಹಾಜರಿದ್ದರು.