ADVERTISEMENT

‘ಪ್ರಥಮ ಚಿಕಿತ್ಸೆ ಅರಿವು ಅಗತ್ಯ’

ಮಕ್ಕಳ ಬೇಸಿಗೆ ಶಿಬಿರದಲ್ಲಿ ಡಾ. ಭಾರತಿ ರಾಜಶೇಖರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಮೇ 2018, 12:09 IST
Last Updated 16 ಮೇ 2018, 12:09 IST
ಮಕ್ಕಳ ಬೇಸಿಗೆ ಶಿಬಿರದಲ್ಲಿ ಡಾ. ಭಾರತಿ ರಾಜಶೇಖರ್‌ ಅವರು ಪ್ರಥಮ ಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಮಕ್ಕಳ ಬೇಸಿಗೆ ಶಿಬಿರದಲ್ಲಿ ಡಾ. ಭಾರತಿ ರಾಜಶೇಖರ್‌ ಅವರು ಪ್ರಥಮ ಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.   

ಹಾಸನ: ಪ್ರತಿಯೊಬ್ಬ ಪ್ರಜೆ, ಮಕ್ಕಳಿಗೆ ಪ್ರಥಮ ಚಿಕಿತ್ಸೆ ಕುರಿತು ಮಾಹಿತಿ ಇರಬೇಕು. ತುರ್ತು ಅವಘಡ ಇಲ್ಲವೇ ಅಪಘಾತ ಸನ್ನಿವೇಶದಲ್ಲಿ ನೆರವಾಗಲು ಇದರಿಂದ ಅನುಕೂಲವಾಗಲಿದೆ ಎಂದು ವಾತ್ಸಲ್ಯ ಆಸ್ಪತ್ರೆಯ ಡಾ. ಭಾರತಿ ರಾಜಶೇಖರ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಸ್ಕೌಟ್ ಭವನದಲ್ಲಿ ಎ.ಎನ್.ಸಿ.ಎಸ್. ಒಪನ್ ಗ್ರೂಪ್ ಸಂಸ್ಥೆಯು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರಲ್ಲಿ ಪ್ರಥಮ ಚಿಕಿತ್ಸೆ ಬಗ್ಗೆ ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆಯ ಅರಿವಿನಿಂದ ಮನೆಯಲ್ಲಿ ಮತ್ತು ಶಾಲೆಯಲ್ಲಿ ತುಂಬಾ ಸಹಾಕಾರಿ
ಯಾಗಲಿದೆ.

ADVERTISEMENT

ಪ್ರಥಮ ಚಿಕಿತ್ಸೆ ಎಂದರೆ ಗಾಯ ಅಥವಾ ಅವಘಡಗಳಾದಾಗ ಒದಗಿಸುವ ಆರಂಭಿಕ ಆರೈಕೆ ಎಂಬುದಾಗಿ ವ್ಯಾಖ್ಯಾನಿಸಬಹುದು. ತರಬೇತಿ ಪಡೆದ ವೃತ್ತಿಪರ ವ್ಯಕ್ತಿಗಳು ರೋಗಿಗೆ ಅಥವಾ ಗಾಯಾಳುವಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರೆಯುವವರೆಗೆ ಒದಗಿಸುತ್ತಾರೆ ಎಂದು ಹೇಳಿದರು.

ಪ್ರಥಮ ಚಿಕಿತ್ಸೆ ಕೆಲ ಸಂದರ್ಭಗಳಲ್ಲಿ ಸರಳ ಚಿಕಿತ್ಸೆಗಳ ಸರಣಿಯಾಗಿದ್ದರೆ, ಇನ್ನು ಕೆಲ ಸಂದರ್ಭಗಳಲ್ಲಿ ಮಹತ್ವದ ಜೀವರಕ್ಷಕ ತಂತ್ರವಾಗಿರುತ್ತದೆ. ತರಬೇತಿ ಪಡೆದ ಒಬ್ಬ ವ್ಯಕ್ತಿ, ಲಭ್ಯವಿರುವ ಕೆಲವು ಉಪಕರಣಗಳ ಮೂಲಕ ಈ ಚಿಕಿತ್ಸೆಯನ್ನು ರೋಗಿ ಅಥವಾ ಗಾಯಾಳುವಿಗೆ ಒದಗಿಸಿ ಜೀವವನ್ನು ರಕ್ಷಿಸಬಲ್ಲ.

ಅವಘಡಗಳು ಸಣ್ಣ ಪುಟ್ಟ ಗಾಯಗಳ ರೂಪದಲ್ಲಿ ಇರಬಹುದು ಅಥವಾ ದೊಡ್ಡ ರೀತಿಯ ಜಖಂ, ಸುಟ್ಟ ಗಾಯ, ಬಿಸಿ ನೀರು, ಬಿಸಿ ಗಾಳಿ, ವಿದ್ಯುತ್ ಅಥವಾ ಮುರಿತಗಳಿಂದ ಆಗುವ ಗಾಯಗಳು, ಪ್ರಾಣಿಗಳ ಕಡಿತ ಅಥವಾ ವಿಷದಿಂದಲೇ ಆಗಿದ್ದಿರಬಹುದು ಎಂದು ವಿವರಿಸಿದರು.

ಈ ಎಲ್ಲಾ ಸಂದರ್ಭಗಳಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ರೋಗಿ ಘಟನಾ ಸ್ಥಳದಿಂದ ಆಸ್ಪತ್ರೆಗೆ ವರ್ಗಾವಣೆಗೊಳ್ಳುವ ಮಧ್ಯದ ಕಾಲಾವಧಿ ಯಲ್ಲಿ ಗಾಯಾಳುವಿಗೆ ಒದಗಿಸ ಬಹುದಾದ ತುರ್ತುಸೇವೆ (ಪ್ರಥಮ ಚಿಕಿತ್ಸೆ) ಬಗ್ಗೆ ಪ್ರತಿಯೊಬ್ಬರೂ ತರಬೇತಿ ಪಡೆಯಬೇಕು ಅಥವಾ ಎಲ್ಲರಿಗೂ ಅದರ ಬಗ್ಗೆ ಅರಿವಿರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮುಖ್ಯ ಆಯುಕ್ತ ಡಾ. ವೈ.ಎಸ್.ವೀರಭದ್ರಪ್ಪ, ಇ.ಎನ್.ಸಿ.ಎಸ್. ಓಪನ್ ಗ್ರೂಪಿನ ಗೌರವ ಸಲಹೆಗಾರ ಜಿ.ಓ.ಮಹಾಂತಪ್ಪ, ಜಿಲ್ಲಾ ಗೈಡ್ ಆಯುಕ್ತ ಎಂ.ಬಿ.ಗಿರಿಜಾಂಬಿಕಾ, ಜಿಲ್ಲಾ ಉಪಾಧ್ಯಕ್ಷ ಜಯಾ ರಮೇಶ್, ಇ.ಎನ್.ಸಿ.ಎಸ್. ಒಪನ್ ಗ್ರೂಪ್‌ನ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್, ಗೌರವಾಧ್ಯಕ್ಷೆ ಎಚ್.ಜಿ.ಕಾಂಚನಮಾಲ, ಜಿಲ್ಲಾ ಸಹಾಯಕ ಆಯುಕ್ತ ವೆಂಕಟೇಶಮೂರ್ತಿ, ಕಾರ್ಯದರ್ಶಿ ಆರ್.ಜಿ.ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.