ADVERTISEMENT

ಬೌದ್ಧಿಕ ಸಾಮರ್ಥ್ಯವೃದ್ಧಿಗೆ ಅಗ್ನಿಹೋತ್ರ ಸಹಕಾರಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 11:14 IST
Last Updated 29 ಆಗಸ್ಟ್ 2016, 11:14 IST

ಹಾಸನ: ವ್ಯಕ್ತಿಯ ಮಾನಸಿಕ ಹಾಗೂ ಬೌದ್ಧಿಕ ಸಾಮರ್ಥ್ಯ ವೃದ್ಧಿಗೆ ಅಗ್ನಿಹೋತ್ರ ಸಹಕಾರಿ ಆಗಿದ್ದು, ವೈಜ್ಞಾನಿಕ ಸಂಶೋಧನೆಗಳಿಂದಲೂ ದೃಢಪಟ್ಟಿದೆ. ಆದ್ದರಿಂದ ಪ್ರಜ್ಞಾವಂತ ನಾಗರಿಕರು ಧಾರ್ಮಿಕ ಕ್ರಿಯೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ವೇದ ಭಾರತೀಯ ಸಂಚಾಲಕ ಹರಿಹರಪುರ ಶ್ರೀಧರ ಹೇಳಿದರು.

ನಗರದ ಲೋಕೋಪಯೋಗಿ ಕಾಲೋನಿಯಲ್ಲಿರುವ ರಾಮ ಮಂದಿರ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಮಾತನಾಡಿದರು.

ವ್ಯಕ್ತಿ ಒಳ್ಳೆಯದನ್ನು ಆಲೋಚಿಸಬೇಕು ಹಾಗೂ ಆ ದಾರಿಯಲ್ಲಿ ಸಾಗಬೇಕು. ಆಸ್ತಿ ಸಂಪಾದನೆ ಜೀವನದ ಗುರಿಯಾಗ ಬಾರದು. ಮಾನಸಿಕ ಶಾಂತಿಗೆ, ಯೋಗ, ಧ್ಯಾನ ನೆರವಾಗುತ್ತವೆ. ಮನಸ್ಸಿನಲ್ಲಿ ಅಡಗಿರುವ ಕೆಟ್ಟ ಆಲೋಚನೆಗಳನ್ನು ಹೊರಹಾಕಲು ಅಗ್ನಿಹೋತ್ರ ಮಾಡಲಾಗುತ್ತದೆ. ಅನೇಕ ವೈಜ್ಞಾನಿಕ ಸಂಶೋಧನೆಗಳು ಭಾರತದ ಧಾರ್ಮಿಕ ಪದ್ಧತಿಯನ್ನು ಒಪ್ಪಿಕೊಂಡಿವೆ ಎಂದರು.

ಅಂತರರಾಷ್ಟ್ರೀಯ ಯೋಗ ದಿನವನ್ನು ಕೇವಲ ಭಾರತ ಮಾತ್ರವಲ್ಲದೆ ಇತರೆ ರಾಷ್ಟ್ರಗಳು ಆಚರಿಸುತ್ತಿವೆ. ಸನಾತನ ಭಾರತೀಯ ಪರಂಪರೆಯ ಮಹತ್ವವನ್ನು ವಿಶ್ವವೇ ಕೊಂಡಾಡುತ್ತಿದೆ. ಆದರೆ, ಕೆಲ ಜನರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಕೇವಲ ಒಂದು ಧರ್ಮ, ಜಾತಿಗೆ ಅಗ್ನಿಹೋತ್ರ, ಯೋಗವನ್ನು ಮೀಸಲಿಡುವ ವ್ಯವಸ್ಥಿತ ತಂತ್ರ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಆಧುನಿಕತೆ ಬೆಳೆದಂತೆ ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚುತ್ತಿದ್ದು, ಅದರಿಂದ ಲಾಭಕ್ಕಿಂತ ನಷ್ಟವೇ ಅಧಿಕವಾಗುತ್ತಿದೆ. ಮಕ್ಕಳು ಹಾಗೂ ಮಹಿಳೆಯರ ಜೀವನದ ಮೇಲೆ ದುಷ್ಪರಿಣಾಮ ಬೀರುವ ಕಾರ್ಯಕ್ರಮಗಳು ಮಾಧ್ಯಮಗಳಲ್ಲಿ ಹೆಚ್ಚಾಗಿ ಬಿತ್ತರಗೊಳ್ಳುತ್ತಿವೆ. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ವ್ಯಕ್ತಿ ದುರ್ಬಲತೆಗೆ ಒಳಗಾಗುತ್ತಿದ್ದಾನೆ ಎಂದು ಅಭಿಪ್ರಾಯಪಟ್ಟರು.

ವೇದಾಧ್ಯಯಿ ನವೀನ್ ಶರ್ಮ ನೇತೃತ್ವದಲ್ಲಿ ಅಗ್ನಿಹೋತ್ರ ನಡೆಯಿತು. ನಿವೃತ್ತ ತಹಶೀಲ್ದಾರ್ ಕ.ವೆಂ.ನಾಗರಾಜ್ ಅವರ ‘ಸಾಧನಾ ಸೋಪಾನಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು. ಎಚ್.ಎಸ್.ಪ್ರಭಾಕರ್, ಶೇಷಪ್ಪ, ಸಿ.ಎಸ್.ಕೃಷ್ಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.