ADVERTISEMENT

ಯೋಗದಿಂದ ರೋಗ ಮುಕ್ತ ಸಮಾಜ

​ಪ್ರಜಾವಾಣಿ ವಾರ್ತೆ
Published 12 ಜೂನ್ 2017, 5:54 IST
Last Updated 12 ಜೂನ್ 2017, 5:54 IST

ಹಾಸನ: ‘ಯೋಗಭ್ಯಾಸದಿಂದ ಸಮಾಜವನ್ನು ರೋಗ ಮುಕ್ತ ಮಾಡುವ ಸಂಕಲ್ಪ ತೊಡಬೇಕು’ ಎಂದು ಪತಂಜಲಿ ಯೋಗಪೀಠದ ರಾಜ್ಯ ಪ್ರಮುಖ ಭವರ್‌ಲಾಲ್‌ ಆರ್ಯ ತಿಳಿಸಿದರು. ವಿಶ್ವ ಯೋಗದಿನದ ಪ್ರಯುಕ್ತ ಜಿಲ್ಲಾ ಪತಂಜಲಿ ಯೋಗ ಸಮಿತಿ ಹಾಗೂ ಯುವಭಾರತ್‌ ಆಶ್ರಯದಲ್ಲಿ ಮಲೆನಾಡು ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ ಭಾನುವಾರ ಸಂಜೆ  ನಡೆದ ಯುವ ಸಮಾವೇಶದಲ್ಲಿ ಅವರು ಮಾತನಾಡಿದರು.

ಯೋಗಗುರು ಬಾಬಾ ರಾಮ್‌ ದೇವ್‌ ದೇಶದಾದ್ಯಂತ ಸಂಚರಿಸಿ ಯೋಗ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿದೆ. ಜೂನ್‌ 21ರೊಳಗೆ ರಾಜ್ಯದ ಪ್ರತಿ ತಾಲ್ಲೂಕು, ಹೋಬಳಿ ಮತ್ತು ಹಳ್ಳಿಗಳಲ್ಲಿ ತರಬೇತಿ ಕೇಂದ್ರ ತೆರೆದು ಯೋಗದ ಮಹತ್ವ ತಿಳಿಸುವ ಆಶಯವಿದೆ ಎಂದರು.

ಅಲ್ಲದೆ, 11 ಸಾವಿರ ಯೋಗ ಶಿಕ್ಷಕರನ್ನು  ನೇಮಿಸುವ ಉದ್ದೇಶವಿದೆ. ಪ್ರತಿ ವಾರ್ಡ್‌ಗಳಲ್ಲಿ ಸ್ವದೇಶಿ ಉತ್ಪನ್ನಗಳ ಮಳಿಗೆಗಳನ್ನು ತೆರೆಯಬೇಕು ಎಂದು ಹೇಳಿದರು.
ಪ್ರತಿಯೊಬ್ಬರು ಪ್ರತಿನಿತ್ಯದ  ಒಂದಿಷ್ಟು ಸಮಯ ಯೋಗಕ್ಕೆ ಮೀಸಲಿಡ ಬೇಕು. ಇಂದು ಇಡೀ ವಿಶ್ವವೇ ಭಾರತದ ಸಂಸ್ಕತಿಯತ್ತ ಮುಖ ಮಾಡಿದೆ. ಈ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ADVERTISEMENT

ಯುವ ಭಾರತ್‌ ಸಂಸ್ಥೆಯ ರಾಜ್ಯ ಪ್ರಭಾರಿ ಪ್ರದೀಪ್‌, ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು. ಯೋಗಾಪಟುಗಳು ವಿವಿಧ ಆಸನ ಪ್ರದರ್ಶಿಸಿದರು.  ಸಾರ್ವಜನಿಕರಿಗೆ ಯೋಗ ಕುರಿತು ಜಾಗ್ರತಿ ಮೂಡಿಸಲು ಮಧ್ಯಾಹ್ನ ಹಾಸನಾಂಬ ಕಲಾ ಭವನ ದಿಂದ ಹೇಮಾವತಿ ಪ್ರತಿಮೆ ಮಾರ್ಗ ವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.