ಹಾಸನ: ಹಿಮಾಚಲ ಪ್ರದೇಶದಿಂದ ಸೇಬು ಮಾರುಕಟ್ಟೆಗೆ ಅಧಿಕ ಆವಕ ಆಗುತ್ತಿರುವುದರಿಂದ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದ್ದು, ಕೆ.ಜಿ ₹ 80 ರಿಂದ 100ರವರೆಗೆ ಮಾರಾಟ ಮಾಡಲಾಗುತ್ತಿದೆ.
‘ವಾರದ ಹಿಂದೆಯಷ್ಟೇ ಕೆ.ಜಿ ಗೆ ₹140 ರಂತೆ ಮಾರಾಟ ಮಾಡಲಾಯಿತು. ಮಾರುಕಟ್ಟೆಯಲ್ಲಿ ಕಾಶ್ಮೀರದ ಸೇಬುಗಳಿಗೆ ಬಲು ಬೇಡಿಕೆ. ಸೆಪ್ಟೆಂಬರ್ನಿಂದ ನವೆಂಬರ್ ವರೆಗೆ ಹಣ್ಣುಗಳ ಅವಧಿ. ಹೊರ ರಾಜ್ಯಗಳಿಗೆ ಅಲ್ಲಿನ ಹಣ್ಣುಗಳು ಬರುವುದಿಲ್ಲ. ಹಾಗಾಗಿ ದರದಲ್ಲಿ ಸ್ವಲ್ಪ ಇಳಿಕೆ ಆಗಿದೆ’ ಎಂದು ಹಣ್ಣಿನ ವ್ಯಾಪಾರಿ ಚಂದ್ರಶೇಖರ್ ಹೇಳುತ್ತಾರೆ.
ತರಕಾರಿ ದರದಲ್ಲೂ ಸ್ವಲ್ಪ ಏರಿಳಿತವಾಗಿದೆ. ಆಲೂಗೆಡ್ಡೆ ಕೆ.ಜಿ ₹ 18 ರಿಂದ ₹ 25ಕ್ಕೆ ಏರಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಆಲೂ ದರ ಏರಿಕೆ ಆಗಿದೆ. ಸತತ ಬರ, ಮತ್ತೊಂದೆಡೆ ನುಸಿ ರೋಗದಿಂದ ತೆಂಗಿನ ಕಾಯಿ ಮತ್ತು ಎಳ ನೀರಿನ ಬೆಲೆ ಗಗನಕೇರಿದೆ. ಸರಾಸರಿ ಗಾತ್ರದ ತೆಂಗಿನ ಕಾಯಿಯನ್ನು ₹15 ರಂತೆ ಮಾರಲಾಗುತ್ತಿದೆ.
ಅಗತ್ಯ ಪ್ರಮಾಣದ ಮಳೆ ಬಾರದೆ ಬಟಾಣಿ ಆವಕ ಕಡಿಮೆಯಾಗಿದೆ. ಕೆ.ಜಿ.ಗೆ ₹ 50 ರಂತೆ ಮಾರಾಟ ಮಾಡಲಾಗುತ್ತಿದೆ. ಮಳೆ ಕೊರತೆಯಿಂದ ತರಕಾರಿಗಳ ಬೆಲೆಯಲ್ಲೂ ಅಲ್ಪ ಮಟ್ಟಿನ ಏರಿಕೆ ಆಗಿದೆ. ಹಸಿರು ಮೆಣಸಿನಕಾಯಿ ಕೆ.ಜಿ ಗೆ ₹ 30, ಹೀರೆಕಾಯಿ ₹ 35, ಈರುಳ್ಳಿ ₹ 25, ಅವರೆಕಾಯಿ ₹ 30, ಶುಂಠಿ ₹ 45 ರಿಂದ ₹ 50, ಕ್ಯಾರೇಟ್ ₹ 63 ಹಾಗೂ ಟೊಮೆಟೊ ₹ 35ಕ್ಕೆ ಲಭ್ಯ ಇದೆ. ಪಾಲಾಕ್, ಕೊತ್ತಂಬರಿ, ಮೆಂತ್ಯ, ದಂಟು ಸೊಪ್ಪುಗಳನ್ನು ಕಟ್ಟಿಗೆ ₹5 ರಿಂದ ₹10 ವರೆಗೆ ಮಾರಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.