ಬೇಲೂರು: ಪಟ್ಟಣದಲ್ಲಿ ಮಿತಿಮೀರಿದ ನಾಯಿ ಹಾವಳಿಯನ್ನು ತಡೆಗಟ್ಟುವ ಸಲುವಾಗಿ ಶನಿವಾರದಿಂದ ಬೀದಿ ನಾಯಿಗಳನ್ನು ಹಿಡಿಯಲಾಗುತ್ತಿದೆ. ಪುರಸಭೆಯಿಂದ ಬೀದಿ ನಾಯಿಗಳನ್ನು ಹಿಡಿಸಲಾಗುತ್ತಿದ್ದು ಇದಕ್ಕಾಗಿ ಮೈಸೂರು ಜಿಲ್ಲೆಯ ಕೆ.ಆರ್.ನಗರದಿಂದ ಗೋವಿಂದ ನೇತೃತ್ವದ ತಂಡವನ್ನು ಕರೆಸಲಾಗಿದೆ.
ಈ ತಂಡ ಶನಿವಾರ ಪಟ್ಟಣದಲ್ಲಿ ಕಾರ್ಯಾಚರಣೆ ನಡೆಸಿ 100 ನಾಯಿಗಳನ್ನು ಸೆರೆ ಹಿಡಿಯಿತು. ಒಂದು ವಾರ ಕಾಲ ಪಟ್ಟಣದಲ್ಲಿ ಕಾರ್ಯಾಚರಣೆ ಮುಂದುವರಿಯಲಿದೆ.
‘ಎರಡು ದಿನಗಳ ಹಿಂದಷ್ಟೇ ಹುಚ್ಚು ನಾಯಿಯೊಂದು ದಾಳಿ ನಡೆಸಿ 24ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿತ್ತು. ಈ ಕಾರಣ ಬೀದಿ ನಾಯಿಗಳನ್ನು ಹಿಡಿಯಲು ಕ್ರಮ ಕೈಗೊಳ್ಳಲಾಗಿದೆ.
ಹಿಡಿದಿರುವ ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿ ನಂತರ ಪಟ್ಟಣದಿಂದ 50 ಕಿ.ಮೀ. ದೂರದ ನಿರ್ಜನ ಪ್ರದೇಶದಲ್ಲಿ ಬಿಡಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್.ಎನ್.ಮಂಜುನಾಥ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.