ಹಳೇಬೀಡು: ಸಾಹಿತ್ಯ, ನುಡಿ ಮೂಲಕ ಮನುಕುಲಕ್ಕೆ ಹೊಸ ಬೆಳಕು ನೀಡಲು ಯತ್ನಿಸಿದ ದಾರ್ಶನಿಕ ಸಂತ ಸೇವಾಲಾಲರ 279ನೇ ಜಯಂತಿ ಕಾರ್ಯಕ್ರಮವನ್ನು ಯನ್ನು ಭಾನುವಾರ ಪಟ್ಟಣದಲ್ಲಿ ವೈಭವದಿಂದ ಆಚರಿಸಲಾಯಿತು.
ಆಲ್ ಬಂಜಾರ ಸೇವಾ ಸಮಿತಿ ಸ್ಥಳೀಯ ಶಾಖೆ ಹಾಗೂ ಬಂಡಿಲಕ್ಕನಕೊಪ್ಪಲು ಲಂಬಾಣಿ ತಾಂಡ್ಯದ ಜನತೆ ಬೆಳಿಗ್ಗೆ ತಾಂಡ್ಯದ ಮರಿಯಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ನಂತರ ಸಂತ ಸೇವಾಲಾಲರ ಭಾವಚಿತ್ರ ಹಾಗೂ ಮರಿಯಮ್ಮ ದೇವಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಆರೋಹಣ ಮಾಡಲಾಯಿತು. ಮಂಗಳವಾದ್ಯ ದೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯು ರಾಜನಶಿರಿಯೂರು ವೃತ್ತದಿಂದ ಬಸವೇಶ್ವರ ವೃತ್ತದ ಮುಖಾಂತರ ಹೊಯ್ಸಳ ವೃತ್ತಕ್ಕೆ ಬಂದು ಸೇರಿತು.
ವೃತ್ತದಲ್ಲಿರುವ ಹೊಯ್ಸಳ ಪ್ರತಿಭೆ ಹಾಗೂ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದ ಬಂಜಾರ ಸಮುದಾಯದವರು ಮರಿಯಮ್ಮ ಹಾಗೂ ಸೇವಾಲಾಲರ ಭಜನೆ ಮಾಡುತ್ತ ಮಂಗಳವಾದ್ಯದ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕಿ ಕುಣಿದರು. ಶ್ವೇತವಸ್ತ್ರಧಾರಿಗಳಾಗಿದ್ದ ಪುರುಷರ ಗುಂಪು ಕುಣಿದು ಸಂಭ್ರಮ ವ್ಯಕ್ತಪಡಿಸಿತು. ಮಹಿಳೆಯರು ಸಹ ನೃತ್ಯ ಮಾಡುತ್ತ ಸೇವಾಲಾಲರನ್ನು ಸ್ಮರಿಸಿದರು.
ಜೆಡಿಆರ್ ಪುಣ್ಯಕೋಟಿ ಟ್ರಸ್ಟ್ ಅಧ್ಯಕ್ಷ ತೊಳಚನಾಯಕ ಮಾತನಾಡಿ, ಸಮಾಜೋದ್ಧಾರಕ ಸೇವಾಲಾಲ ಜಯಂತಿ ಕಾರ್ಯಕ್ರಮವನ್ನು ಸರ್ಕಾರವೇ ಆಚರಿಸಲು ನಿರ್ಧರಿಸಿರುವುದು ಸಮಾಜಕ್ಕೆ ಸಂದ ಗೌರವ’ ಎಂದರು.
ನಿವೃತ್ತ ಜಿಲ್ಲಾ ಖಜಾನಾಧಿಕಾರಿ ರಾಮಗಿರಿನಾಯ್ಕ ಅವರು, ‘ಸೇವಾಲಾಲರು ಕೇವಲ ಲಂಬಾಣಿ ಜನಾಂಗಕ್ಕೆ ಸೀಮಿತರಾದವರಲ್ಲ, ಎಲ್ಲ ಜನಾಂಗದವರ ಏಳಿಗೆಗೆ ಶ್ರಮಿಸಿದ್ದಾರೆ’ ಎಂದು ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯ ಗೋವಿಂದ ನಾಯ್ಕ, ಆಲ್ ಇಂಡಿಯಾ ಬಂಜಾರ ಸೇವಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಚಂದ್ರನಾಯ್ಕ, ಹೋಬಳಿ ಘಟಕ ಅಧ್ಯಕ್ಷ ರವಿನಾಯ್ಕ, ಸದಸ್ಯರಾದ ಮೂರ್ತಿನಾಯ್ಕ. ಸೋಮಶೇಖರ ನಾಯ್ಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.