ಹಾವೇರಿ: ‘ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರು ಮಾತ್ರ ಪ್ರತಿಭಾವಂತರಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಹೊರ ಜಗತ್ತಿಗೆ ಪರಿಚಯವಾಗಲು ಸಾಧ್ಯ’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ನೊಳಂಬ ವೀರಶೈವ ಸಂಘ ಹಾಗೂ ರತ್ನಮ್ಮ ಶಿವನಗೌಡ ಪಾಟೀಲ್ ಅವರು ಪಿ.ಬಿ.ರಸ್ತೆಯ ಆರ್.ಟಿ.ಓ. ಕಚೇರಿ ಸಮೀಪದ ಗುರುಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡ ‘ಪ್ರತಿಭಾ ಪುರಸ್ಕಾರ ಸಮಾರಂಭ’ದಲ್ಲಿ ಮಾತನಾಡಿದರು.
‘ಪ್ರತಿಭೆಗೆ ಜಾತಿ, ಕುಲ ಗೋತ್ರ, ಬಡವ, ಶ್ರೀಮಂತ ಎಂಬಿತ್ಯಾದಿ ಭೇದಭಾವವಿಲ್ಲ. ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಅಡಗಿರುತ್ತದೆ. ಅದಕ್ಕೆ ಪೋಷಕರು ಅಥವಾ ಶಿಕ್ಷಕರು ಪ್ರೋತ್ಸಾಹಿಸಬೇಕು. ಆಗ ಆ ವ್ಯಕ್ತಿ ಹೆಸರು ಮಾಡಲು ಸಾಧ್ಯ’ ಎಂದರು.
‘ಸಮಾಜವು ಮಕ್ಕಳಲ್ಲಿನ ಪ್ರತಿಭೆಯನ್ನು ಮಾತ್ರ ಗುರುತಿಸುತ್ತಿದೆ, ಪ್ರತಿಭೆಗೆ ಶಕ್ತಿ ತುಂಬಿ ಪ್ರಜ್ವಲಿಸುವಂತೆ ಮಾಡಬೇಕು. ಪ್ರತಿ ವಿದ್ಯಾರ್ಥಿ ಉತ್ತಮ ಗುರಿಯನ್ನು ಸಾಧಿಸುವ ದೃಢ ನಿರ್ಧಾರ ಮಾಡಬೇಕು’ ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ‘ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಅಗತ್ಯ. ಅದಕ್ಕಾಗಿ ಪ್ರತಿ ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರಯುಕ್ತ ಶಿಕ್ಷಣವನ್ನು ಕೊಡಿಸಬೇಕು’ ಎಂದರು.
‘ಜಿಲ್ಲೆಯಲ್ಲಿ ನೊಳಂಬ ವೀರಶೈವ ಸಮುದಾಯದ ಜನಸಂಖ್ಯೆ ಕಡಿಮೆ ಇದ್ದರೂ, ಸಮುದಾಯದ ಮಕ್ಕಳು ಶಿಕ್ಷಣದಲ್ಲಿ ಉನ್ನತ ಶ್ರೇಣಿಯಲ್ಲಿ ಇದ್ದಾರೆ. ಅವರಿಗೆ ಬೇಕಾದ ಸಹಾಯವನ್ನು ಸಂಘ ಮಾಡುತ್ತಿದೆ’ ಎಂದು ಶ್ಲಾಘಿಸಿದರು.
ನೊಳಂಬ ವೀರಶೈವ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಂ.ನಾಗರಾಜು ಮಾತನಾಡಿ, ‘ಪ್ರತಿ ವಿದ್ಯಾರ್ಥಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಒತ್ತು ನೀಡಬೇಕು. ಆಗ ಐಎಎಸ್, ಐಪಿಎಸ್ ಉತ್ತೀರ್ಣರಾಗಲು ಸಾಧ್ಯ’ ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ‘ನೊಳಂಬ ವೀರಶೈವ ಸಂಘದಿಂದ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಮುಂದೆ ಉನ್ನತ ಹುದ್ದೆಗಳನ್ನು ಪಡೆಯಬೇಕು. ಅನಂತರ ಸಮಾಜಕ್ಕೆ ಸಹಾಯ ಮಾಡಬೇಕು’ ಎಂದ ಅವರು, ‘ಸಂಘದ ವಿದ್ಯಾರ್ಥಿ ವಸತಿ ನಿಲಯಕ್ಕೆ ಕೊಳವೆಬಾವಿ ಕೊರೆಯಿಸಿ ಕೊಡಲಾಗುವುದು’ ಎಂದರು.
2017ರ ಎಸ್ಸೆಸ್ಸೆಲ್ಸಿ ಹಾಗೂ ಪಿ.ಯು.ಸಿ.ಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕ ಪಡೆದ ನೊಳಂಬ ಸಮುದಾಯದ ಒಟ್ಟು 63 ವಿದ್ಯಾರ್ಥಿಗಳಿಗೆ ಪ್ರತಿಭಾ ಪುಸ್ಕಾರ ನೀಡಲಾಯಿತು.
ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಆರ್.ಪಾಟೀಲ್, ಗೌರವ ಕಾರ್ಯದರ್ಶಿ ಎಚ್.ರಾಮಲಿಂಗಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಕೆ.ಮೆಣಸಿನಕಾಯಿ, ಕಾರ್ಯದರ್ಶಿ ಬಿ.ವಿ.ಕುಲ್ಮಿ, ಕಾಗಿನೆಲೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಕಾಶಗೌಡ ಪಾಟೀಲ, ನಿವೃತ್ತ ಪ್ರಾಚಾರ್ಯ ಎಸ್.ದೊಡ್ಡಬಸಣ್ಣನವರ, ಆರ್.ಎಸ್.ಪಾಟೀಲ, ಬಿ.ಆರ್.ಪಾಟೀಲ, ಶಿವನಗೌಡ ಪಾಟೀಲ, ಬಸವರಾಜ ಹಾದಿಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.