ADVERTISEMENT

ಐರಣಿ ಸ್ವಾಮೀಜಿ ಪಟ್ಟಾಭಿಷೇಕ ಮಹೋತ್ಸವ

ನ.1ರಿಂದ 3ರವರೆಗೆ ರಾಣೆಬೆನ್ನೂರಿನ ನಗರಸಭೆ ಕ್ರೀಡಾಂಗಣದಲ್ಲಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 6:51 IST
Last Updated 25 ಅಕ್ಟೋಬರ್ 2014, 6:51 IST

ರಾಣೆಬೆನ್ನೂರು: ಆರೂಢ ಪರಂಪರೆಯ ಸುಕ್ಷೇತ್ರ ಐರಣಿ (ಐರಾವತ) ಹೊಳೆಮಠದ ಸಂಸ್ಥಾನಾಧಿಪತಿ ಲಿಂಗೈಕ್ಯ ಮುಪ್ಪಿನಾರ್ಯ ಸ್ವಾಮೀಜಿ ಅವರ ಶಿಷ್ಯ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಅವರು ಪಟ್ಟಾಭಿಷಕ್ತರಾಗಿ ನಾಲ್ಕು ದಶಕಗಳ ಕಾಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಯುಕ್ತ ಸುವರ್ಣ ಕಿರೀಠ ಧಾರಣೆ, ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮಸಭೆ, ಸಾಮೂಹಿಕ ವಿವಾಹ, ಆನೆ ಅಂಬಾರಿ ಉತ್ಸವ, ನಾಣ್ಯತುಲಾಭಾರ, ಗಜಗೌರಿ ವೃತ, ಆಚರಣೆಯೊಂದಿಗೆ 3,700 ಮುತ್ತೈದೆಯರಿಗೆ ಬಾಗಿನ ಕೊಡುವ ಮತ್ತು ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮ ನ.1ರಿಂದ 3ರವರೆಗೆ ರಾಣೆಬೆನ್ನೂರಿನ ನಗರಸಭೆ ಕ್ರೀಡಾಂಗಣದಲ್ಲಿ ನೆರವೇರುವುದು.

ಮಠದ ಕಾರ್ಯದರ್ಶಿ ಬಾಬು ಐರಣಿ ಮಾತನಾಡಿ, ನ.1 ರಂದು ಮಧ್ಯಾಹ್ನ ಐರಣಿ ಹೊಳೆಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ  ನಗರ ಪ್ರವೇಶ, ನಂತರ ಧ್ವಜಾರೋಹಣ, ಸಂಜೆ 5 ಗಂಟೆಗೆ ನಾಣ್ಯಗಳ ತುಲಾಭಾರ ಹಾಗೂ ಧರ್ಮಸಭೆ ನಂತರ ಪ್ರಸಾದ ವಿತರಣೆ ನಡೆಯುವುದು.

ನ.2 ರಂದು ಬೆಳಿಗ್ಗೆ 8 ಗಂಟೆಗೆ ನಗರದ ಕೊಟ್ಟೂರೇಶ್ವರ ಮಠದಲ್ಲಿ ಐರಣಿ ಶ್ರೀಗಳಿಗೆ ಸುವರ್ಣ ಕೀರೀಠ ಧಾರಣೆ, ನಂತರ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಮಹೋತ್ಸವ, ಸಂಜೆ 5 ಗಂಟೆಗೆ ಧರ್ಮಸಭೆ ನಡೆಯುವುದು.

ನ.3 ರಂದು ಬೆಳಿಗ್ಗೆ 8 ಗಂಟೆಗೆ ನಗರಸಭಾ ಕ್ರೀಡಾಂಗಣದಲ್ಲಿ ಗಜಗೌರಿ ದೇವಿ ಮೂರ್ತಿ ಸ್ಥಾಪನೆ ಮತ್ತು ವೃತ ಆಚರಣೆ, ಮುತ್ತೈದೆಯರಿಗೆ ಬಾಗಿನ ಅರ್ಪಿಸುವುದು ಮತ್ತು ಧರ್ಮಸಭೆ ನಡೆಯುತ್ತದೆ ಎಂದು ತಿಳಿಸಿದರು.

ಐರಣಿ ಶ್ರೀಗಳ ಪಟ್ಟಾಭೀಷೇಕ ಮಹೋತ್ಸವದ ಹಿನ್ನೆಲೆಯಲ್ಲಿ 3 ದಿನಗಳ ಕಾಲ ನಗರಸಭೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದ ಪೂರ್ವ ತಯಾರಿಯನ್ನು ಕಾಗಿನೆಲೆ ನಿರಂಜನಾನಂದ ಸ್ವಾಮೀಜಿ ಮತ್ತು ವಿರಕ್ತಮಠದ ಗುರುಬಸವ ಸ್ವಾಮೀಜಿ ಅವರು ಪೂರ್ವ ಭಾವಿಯಾಗಿ ದೀಪಾವಳಿ ಹಬ್ಬದಂದು ಶುಕ್ರವಾರ ವೀಕ್ಷಿಸಿದರು.

ಐರಣಿ ಶ್ರೀಗಳ ಪಟ್ಟಾಭೀಷೇಕ ಮಹೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ತಿಪಟೂರಿನ ಶಂಕರ ಜ್ಯೋತಿ ಪೆಂಡಾಲ್‌ ಅವರಿಂದ  280 ಉದ್ದ 180 ಅಗಲದ ಅಳತೆಯ  ಬೃಹತ್‌ ಪೆಂಡಾಲ್‌, 10 ಸಾವಿರ ಆಸನ ವ್ಯವಸ್ಥೆ ಇದ್ದು, 1ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ಮಠದ ಭಕ್ತರೊಡನೆ ಚರ್ಚಿಸುತ್ತ ಅವರು ತಿಳಿಸಿದರು.

ಎರಡು ನೂರಕ್ಕೂ ಹೆಚ್ಚು ಸಾಧು ಸಂತರು ಪಾಲ್ಗೊಳ್ಳುವರು. ಸ್ಟೇಡಿಯಂ ಪಕ್ಕದಲ್ಲಿಯೇ 3 ದಿನ ಅನ್ನದಾಸೋಹ ನಡೆಯುತ್ತದೆ, ರವೆ ಪಾಯಸ, ಬೊಂಡಾ,  ಗೋಧಿ ಹುಗ್ಗಿ, ಕೇಸರಿ ಬಾತ್‌, ರೊಟ್ಟಿ, ಚಟ್ನಿ, ಕಡಬು, ಕಾಳಿನ ಪಲ್ಯ, ಅನ್ನ ಸೊಪ್ಪಿನ ಸಾರು ಮಾಡಲಾಗುವುದು ಎಂದು ಬಾಬು ಐರಣಿ ತಿಳಿಸಿದರು.

ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಹೊನ್ನಾಳಿ, ಕೋಣನತೆಲಿ, ಬೀರನಕೇರಿ, ಕಾಗಿನೆಲೆ (ಶಿಕಾರಿಪುರ ತಾ), ಹರಿಹರ, ಮೈಸೂರು, ಬೆಂಗಳೂರು, ದಿಡಗೂರು ಸೇರಿದಂತೆ ನಾಡಿನ ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವರು.

ಮಾಜಿ ಶಾಸಕ ಜಿ.ಶಿವಣ್ಣ, ಜಿ.ಪಂ. ಮಾಜಿ ಉಪಾಧ್ಯಕ್ಷ ಎಸ್‌.ಎಸ್‌.ರಾಮಲಿಂಗಣ್ಣನವರ, ಕೆ.ಶಿವಲಿಂಗಪ್ಪ, ಚೋಳಪ್ಪ ಕಸವಾಳ, ಶಿವಾನಂದ ಸಾಲಗೇರಿ, ವಕೀಲಪ್ಪ,ಅಣ್ಣಪ್ಪ ಸಪ್ಪಾಳಿ,ರುದ್ರಪ್ಪ ಹರವಿ, ಬುಳ್ಳಪ್ಪ ಕಟಗಿ, ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.