ಶಿಗ್ಗಾವಿ: ‘ಸುಡು ಬಿಸಿಲಿನಲ್ಲಿ ಉಚಿತವಾಗಿ ನೀರು ದಾನ ಮಾಡುವ ಕಾರ್ಯಕ ಸರ್ವಶ್ರೇಷ್ಠವಾದುದಾಗಿದೆ. ಇಂತಹ ಸೇವೆ ಮಾಡುತ್ತಿರುವ ಭರತ ಸೇವಾ ಸಮಿತಿ ಕಾರ್ಯ ಶ್ಲಾಘನೀಯ’ ಎಂದು ಚಂದ್ರಶೇಖರಯ್ಯ ಹಿರೇಮಠ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹಿರೇಮಲ್ಲೂರ ಗ್ರಾಮಕ್ಕೆ ಭರತ ಸೇವಾ ಸಂಸ್ಥೆ ವತಿಯಿಂದ ಭಾನುವಾರ ಉಚಿತ ನೀರು ಒದಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹುಟ್ಟಿದ ಪ್ರತಿಯೊಬ್ಬರು ಸಮಾಜದ ಋಣ ತೀರಿಸಬೇಕಾಗುತ್ತದೆ. ಅದನ್ನು ಇಂತಹ ಕಾರ್ಯಗಳಿಂದ ಮಾಡುವುದು ಅವಶ್ಯವಾಗಿದೆ’ ಎಂದರು.
ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ‘ಇಡೀ ತಾಲ್ಲೂಕಿನಲ್ಲಿ ಹಿರೇಮಲ್ಲೂರ ಮತ್ತು ಚಿಕ್ಕಮಲ್ಲೂರ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗಿದೆ. ಕಳೆದ ಬಾರಿ ಬೇಸಿಗೆಯಲ್ಲಿ ನಾಲ್ಕು ತಿಂಗಳು ಉಚಿತವಾಗಿ ನೀರು ಸರಬರಾಜು ಮಾಡಲಾಗಿತ್ತು. ಅದರಂತೆ ಈ ಬಾರಿ ಮತ್ತೆ ನಮ್ಮ ಸಂಸ್ಥೆ ಮೂಲಕ ನಿತ್ಯ 8 ಟ್ಯಾಂಕರ್ ನೀರು ಪೂರೈಕೆ ಮಾಡುವ ಕಾಯಕ ಆರಂಭಿಸಲಾಗಿದೆ. ಗ್ರಾಮಸ್ಥರು ಅಗತ್ಯಕ್ಕೆ ತಕ್ಕಂತೆ ನೀರು ಬಳಸಬೇಕು’ ಎಂದು ಹೇಳಿದರು.
ಈ ಗ್ರಾಮದಲ್ಲಿ 600 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಚಿಕ್ಕಮಲ್ಲೂರ ಮತ್ತು ಹಿರೇಮಲ್ಲೂರು ಗ್ರಾಮದಲ್ಲಿ ಸರ್ಕಾರ ಈಗಾಗಲೇ 30ಕ್ಕೂ ಹೆಚ್ಚಿನ ಕೊಳವೆಬಾವಿಗಳನ್ನು ತೆಗೆಸಿದೆ. ಆದರೆ, ನೀರು ಮಾತ್ರ ಸಿಕ್ಕಿಲ್ಲ. ಇದರಿಂದಾಗಿ, ಗ್ರಾಮದಲ್ಲಿ ಜೀವನ ನಡೆಸುವುದೇ ಕಷ್ಟಕರವಾಗಿದೆ’ ಎಂದರು.
ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೀರಭದ್ರಗೌಡ್ರ ಹೊಸಗೌಡ್ರ, ಫಕ್ಕೀರಗೌಡ್ರ ಹುಡೇದಗೌಡ್ರ, ಟಾಕನಗೌಡ್ರ ಪಾಟೀಲ, ಈಶ್ವರಗೌಡ ಪಾಟೀಲ, ಬಸವರಾಜ ಲಂಗೋಟಿ, ವೀರನಗೌಡ್ರ ಹೊನ್ನಾಗೌಡ್ರ, ನಾಗರಾಜ ಜವಾಯಿ, ಅನೀಲ ಸಾತಣ್ಣವರ, ಮಂಜು ದುಬೈ, ಅಣ್ಣಪ್ಪ ಬಡ್ಡಿ, ರವಿ ಮಡಿವಾಳರ, ಶಂಕರಗೌಡ್ರ ಕರೆಗೌಡ್ರ, ಈಶ್ವರಗೌಡ ಕರೆಗೌಡ್ರ, ಶಿವನಗೌಡ ಸಣ್ಣನಿಂಗನಗೌಡ್ರ, ರವಿ ಮಹಾಂತಶೆಟ್ಟರ, ಮಲ್ಲನಗೌಡ ಹುತ್ತನಗೌಡ್ರ, ಗದಿಗೆಪ್ಪ ಮುಗದೂರ, ಮಂಜುನಾಥ ಕಂಕನವಾಡ, ಮಾನಪ್ಪ ಬಡಿಗೇರ ಹಾಗೂ ಸಂತೋಷ ದೊಡ್ಡಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.