ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ಸುಂಕದಕೆರಿ ಅಯ್ಯನ ಹೊಂಡದ ಬಳಿ ಕುಡಿಯುವ ನೀರಿನ ಕೊಳವೆ ಬಾವಿಗೆ ಅಳವಡಿಸಿದ ವಿದ್ಯುತ್ ಬೋರ್ಡ್ನಲ್ಲಿನ ವಿದ್ಯುತ್ ತಂತಿ ತಾಗಿ ಯುವಕರೊಬ್ಬರು ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.
ಸುರೇಶ ಮುದಿಯಪ್ಪ ಸುಂಕದ(23) ಮೃತರು. ‘ಗುರುವಾರ ರಾತ್ರಿ ಇಡೀ ವಿದ್ಯುತ್ ಇಲ್ಲದ ಕಾರಣ ಕುಡಿಯುಲು ನೀರಿಲ್ಲ ಸಿಕ್ಕಿಲ್ಲ. ಹೀಗಾಗಿ ಶುಕ್ರವಾರ ಸಂಜೆ ಅಯ್ಯನ ಹೊಂಡದ ಹತ್ತಿರದ ಕೊಳವೆಬಾವಿಗೆ ನೀರು ತರಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸಾರ್ವಜನಿಕರಿಂದ ಪ್ರತಿಭಟನೆ: ವಿದ್ಯುತ್ ತಂತಿ ತಾಗಿ ಯುವಕ ಮೃತಪಟ್ಟಿರುವುದಕ್ಕೆ ಪುರಸಭೆ ನಿರ್ಲಕ್ಷವೇ ಕಾರಣ ಎಂದು ಆಗ್ರಹಿಸಿ ಸ್ಥಳೀಯರು ಪುರಸಭೆ ಮುಖ್ಯದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಬಂಕಾಪುರ ಸುಂಕದಕೆರಿ ಅಯ್ಯನ ಹೊಂಡದಲ್ಲಿನ ಕೊಳವೆ ಬಾವಿಗೆ ಅಳವಡಿಸಿದ ವಿದ್ಯುತ್ ಬೋರ್ಡ್ನಲ್ಲಿ ಪದೇ,ಪದೇ ವಿದ್ಯುತ್ ಪ್ರವಹಿಸುತ್ತಲೇ ಇರುತ್ತದೆ. ಅದನ್ನು ಅದನ್ನು ಸರಿಪಡಿಸುವಂತೆ ಹಲವು ಬಾರಿ ಪುರಸಭೆಗೆ ಮನವಿ ಮಾಡಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರು. ಹೀಗಾಗಿ ಯುವಕ ಬಲಿಯಾದ ಎಂದು ಯುವಕನ ಸಂಬಂಧಿಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
‘ಈ ಹಿಂದೆ ನಾಲ್ಕೈದು ಜನರಿಗೆ ವಿದ್ಯುತ್ ತಂತಿ ತಾಗಿದ ಸಂದರ್ಭದಲ್ಲಿ ಪುರಸಭೆಗೆ ಬಂದು ಮನವಿ ಮಾಡಲಾಗಿದೆ. ಸುಂಕದಕೆರಿ ಜನರು ನಿತ್ಯ ಕುಡಿಯಲು ಇದೇ ಹೊಂಡದಿಂದ ನೀರು ತರಲಾಗುತ್ತಿದೆ’ ಎಂದು ಇಲ್ಲಿನ ನಿವಾಸಿ ರಾಮಕೃಷ್ಣ ಆಲದಕಟ್ಟಿ ತಿಳಿಸಿದರು.
**
ಈ ಹಿಂದೆ ವಿದ್ಯುತ್ ಬೋರ್ಡ್ ರಿಪೇರಿ ಮಾಡಲಾಗಿತ್ತು. ಗುರುವಾರ ರಾತ್ರಿ ಗಾಳಿ-ಮಳೆಗೆ ವಿದ್ಯುತ್ ತಂತಿಗಳು ಕಿತ್ತು ಹೊರಬಂದಿರುವ ಸಾಧ್ಯತೆ ಇದೆ
– ರೇಣುಕಾ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ, ಬಂಕಾಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.