ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಆಸ್ತಿ, ನೀರು ಹಾಗೂ ಕಸ ವಿಲೇವಾರಿ ಕರ ಹೆಚ್ಚಿಸಿರುವುದನ್ನು ಖಂಡಿಸಿ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿ ಎಚ್.ಎ.ಕುಮಾರ ಅವರಿಗೆ ಸೋಮವಾರ ಮನವಿ ಅರ್ಪಿಸಿದರು.
‘ಬಂಕಾಪುರ ಪಟ್ಟಣದಲ್ಲಿ ಶೇ 75ರಷ್ಟು ಜನರು ಕೃಷಿ ಕೂಲಿಕಾರರಿದ್ದಾರೆ. ನಿತ್ಯ ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಅಲ್ಲದೆ ಕಳೆದ ಮೂರು ವರ್ಷಗಳಿಂದ ಮಳೆ–ಬೆಳೆ ಸರಿಯಾಗಿ ಆಗಿಲ್ಲ. ಅಂತಹ ಸ್ಥಿತಿಯಲ್ಲಿ ಪುರಸಭೆ ದಿಢೀರ್ ಆಗಿ ತೆರಿಗೆ ಹೆಚ್ಚಳ ಮಾಡುತ್ತಿದೆ’ ಎಂದು ದೂರಿದರು.
‘ಪುರಸಭೆಯಿಂದ ಮನೆ, ಮನೆಗೆ ಹೋಗಿ ಕಸ ಸಂಗ್ರಹಣೆ ಮಾಡುತ್ತಿಲ್ಲ. ಆದರೂ ಕಸವಿಲೇವಾರಿ ಕರ ವಸೂಲಿ ಮಾಡಲಾಗುತ್ತಿದೆ. ಕಸ ಸಂಗ್ರಹಿಸಿ ಸಾಗಾಟ ಮಾಡುವವರಿಗೆ ದುಡ್ಡು ಕೇಳದಂತೆ ಸೂಚಿಸಬೇಕು. ತಿಂಗಳಿಗೆ ಒಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ. ಆದರೂ ತೆರಿಗೆ ವಸೂಲಿ ಯಾಕೆ ಮಾಡುತ್ತಿದ್ದಾರೆ’ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.
ಅಲ್ಲದೇ, ‘ಕನಿಷ್ಠ 2ರಿಂದ 3ದಿನಕ್ಕೆ ನೀರು ಬಿಡುವುದಾದರೆ, ನೀರಿನ ಕರ ವಸೂಲಿ ಮಾಡಲಿ’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಮನವಿ ಸಲ್ಲಿಕೆ ವೇಳೆ, ಮುಖಂಡರಾದ ಬಸವರಾಜ ನಾರಾಯಣಪುರ, ರಾಮಕೃಷ್ಣ ಆಲದಕಟ್ಟಿ, ಆರ್.ವೈ.ಸುಲಾಖೆ, ರುದ್ರೇಶ ಪವಾಡಿ, ಎಂ.ಎಂ.ಹಂಜಗಿ, ಆನಂದ ವಳಗೇರಿ,ನನ್ನೆಸಾಬ ದೇವಗಿರಿ, ಕೆ.ಪಿ.ಸಕ್ರಿ, ಗುಡ್ಡಪ್ಪ ಮತ್ತೂರ, ಮಾಂಬಳೇಶ ವಳಗೇರಿ, ಮಹಾದೇವಪ್ಪ ವಡ್ಡರ,ವೀರೇಶ ರುದ್ರಾಕ್ಷಿ, ಮಣಿಕಂಠ ಕಟಗಿಮಠ, ಹುಲಿಗೆಪ್ಪ ಗುಳೇದ, ಆಂಜನೇಯ ಗುಡಗೇರಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.