ಕುಮಾರಪಟ್ಟಣ: ಹರಿಹರ ತಾಲ್ಲೂಕಿನ ಶ್ರೀಕ್ಷೇತ್ರ ಉಕ್ಕಡಗಾತ್ರಿ ಶ್ರೀ ಅಜ್ಜಯ್ಯನ ಸನ್ನಿಧಿಗೆ ಹನುಮನಹಳ್ಳಿ ಗ್ರಾಮದ ಮೂಲಕ ಪ್ರತಿ ಅಮಾವಾಸ್ಯೆಯಂದು ಬೆಂಗಳೂರು, ಚಿತ್ರದುರ್ಗ, ದಾವಣ ಗೆರೆಯಿಂದ ಅನೇಕ ಭಕ್ತರು ಸಾರಿಗೆ ಹಾಗೂ ಖಾಸಗಿ ವಾಹನಗಳಲ್ಲಿ ಬಂದು ಹೋಗುತ್ತಾರೆ. ಇದಲ್ಲದೆ ರಾಣೆ ಬೆನ್ನೂರು ನಗರಕ್ಕೆ ಮುದೇನೂರು, ಮಾಕನೂರು ಕುಮಾರಪಟ್ಟಣದ ಮೂಲಕ ಹರಿಹರ ನಗರ ತಲುಪಲು ಈ ಗ್ರಾಮ ಸಂಪರ್ಕ ಸೇತುವೆಯಾಗಿದೆ.
ಕುಮಾರಪಟ್ಟಣ ಸಮೀಪದ ಹನುಮನಹಳ್ಳಿ ಗ್ರಾಮದಲ್ಲಿ ಶುದ್ದ ನೀರು ಪೂರೈಕೆ ಯೋಜನೆಯಡಿಯಲ್ಲಿ ₹ 12 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ನಿರ್ಮಿಸಿ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದರೂ ಗ್ರಾಮಸ್ಥರಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಭಾಗ್ಯ ದೊರೆಯದೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಮುದೇನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಇದಾಗಿದ್ದು, ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಜನತೆಗೆ ಶುದ್ದಿಕರಿಸಿದ ನೀರು ಪೂರೈಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಶುದ್ದ ನೀರು ಪೂರೈಸಲು ದುರ್ಗಾದೇವಿ ದೇವಸ್ಥಾನದ ಬಳಿ ನಿರ್ಮಿಸಿರುವ ಶುದ್ದಿಕರಣ ಘಟಕದ ಕಾಮಗಾರಿ ಪೂರ್ಣಗೊಂಡು ಶುದ್ದಿಕರಣ ಯಂತ್ರ ಅಳವಡಿಸಲಾಗಿದೆ. ಈ ಘಟಕಕ್ಕೆ ನೀರು ಪೂರೈಸಲು ಬೋರ್ವೆಲ್ ಕೂಡ ಕೊರೆಸಲಾಗಿದೆ ಇನ್ನೂ ಪೈಪ್ಲೈನ್ ಅಳವಡಿಸುವ ಕಾರ್ಯ ಮಾತ್ರ ಬಾಕಿ ಉಳಿದಿದೆ. ಕಳೆದ 5-–6 ವರ್ಷಗಳಿಂದ ಪಕ್ಕದ ತರೇದಹಳ್ಳಿ ಗ್ರಾಮದ ಚಿಕನ್ ಪ್ಯಾಕ್ಟರಿಯಿಂದ ಶುದ್ದನೀರು ಪೂರೈಸಲಾಗುತ್ತಿದೆ ಆದರೆ ನೀರಿನಲ್ಲಿ ಸವಳು ಮತ್ತು ಪ್ಲೋರೈಡ್ ಅಂಶ ಇರುವದರಿಂದ ಜನರು ಆ ನೀರು ಕುಡಿ ಯಲು ಯಾರೂ ಮನಸ್ಸು ಮಾಡುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು
ಮದ್ಯಮ ವರ್ಗದ ಒಂದು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಶುದ್ದ ನೀರಿನ ಘಟಕ ಪ್ರಾರಂಭಗೊಂಡರೆ ನೆರೆಯ ಮಲಕನಹಳ್ಳಿ ಹಾಗೂ ಕೃಷ್ಣಾಪುರ ಗ್ರಾಮಗಳ ಜನರಿಗೂ ಇದರ ಪ್ರಯೋಜನ ಆಗುತ್ತದೆ ಎಂಬುದು ಗ್ರಾಮಸ್ಥರ ಆಶಯ.
**
ಘಟಕದ ನಿರ್ಮಾಣ ಮತ್ತು ನಿರ್ವಹಣೆಯನ್ನು ಐದು ವರ್ಷಗಳ ಅವಧಿಗೆ ಗುತ್ತಿಗೆದಾರರಿಗೆ ನೀಡಲಾಗಿದೆ ತುರ್ತಾಗಿ ಪ್ರಾರಂಭಿಸಲು ಸೂಚಿಸುತ್ತೇನೆ
ಗಿರಿಜಮ್ಮ ಬ್ಯಾಲದಹಳ್ಳಿ , ಸದಸ್ಯೆ, ಜಿಲ್ಲಾ ಪಂಚಾಯ್ತಿ ತುಮ್ಮಿನಕಟ್ಟಿ ಕ್ಷೇತ್ರ
**
ತಾಂತ್ರಿಕ ಕಾರಣದಿಂದಾಗಿ ಗ್ರಾಮದ ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆಗೆ ಸ್ವಲ್ಪ ಅಡಚಣೆಯಾಗಿದೆ ಸಧ್ಯದಲ್ಲಿಯೇ ನೀರು ಪೂರೈಸಲು ಕ್ರಮ ಕೈಗೊಳ್ಳುತ್ತೇನೆ
– ರಾಮಕೃಷ್ಣ, ಸಹಾಯಕ ಎಂಜಿನಿಯರ್,ರಾಣೇಬೆನ್ನೂರು
**
ಸೂರಲಿಂಗಯ್ಯ ಎನ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.