ಹಾವೇರಿ: ನಗರದ ಕೆಇಬಿ ವೃತ್ತದಿಂದ ಗುತ್ತಲ ರಸ್ತೆಯ ರೈಲ್ವೆ ಮೇಲ್ ಸೇತುವೆ ತನಕದ ರಸ್ತೆಯ ಇಕ್ಕೆಲೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ರಚನೆಗಳು ಹಾಗೂ ಅಂಗಡಿ ಮುಗಟ್ಟುಗಳನ್ನು ಗುರುವಾರ ಲೋಕೋಪಯೋಗಿ ಇಲಾಖೆ, ನಗರಸಭೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಿದರು.
ಕೆ.ಇ.ಬಿ. ವೃತ್ತದಿಂದ ಬಲ್ಡೋಜರ್ ಮೂಲಕ ತೆರವು ಕಾರ್ಯಾಚರಣೆ ಆರಂಭಿಸಿದರು. ಅಲ್ಲಿನ ಪಾದಚಾರಿ ಮೇಲಿರುವ ಬಂಡಿಗಳನ್ನು ತೆರವುಗೊಳಿಸಿದರು. ಬಳಿಕ ರಸ್ತೆಯ ಬದಿಯನ್ನು ಅತಿಕ್ರಮಿಸಿಕೊಂಡ ಅಂಗಡಿ, ಅಕ್ರಮ ರಚನೆಗಳನ್ನು ತೆರವು ಮಾಡಿದರು. ಕೆಲವೆಡೆ ಸ್ಥಳೀಯರ ಪ್ರತಿರೋಧ ವ್ಯಕ್ತವಾದರೂ, ಅಧಿಕಾರಿಗಳು ತೆರವು ಕಾರ್ಯಾಚರಣೆ ಮುಂದುವರಿಸಿದರು.
ಚರಂಡಿ ಮೇಲೆ ಅಕ್ರಮ ನಿರ್ಮಾಣದ ಪರಿಣಾಮ, ಹಲವೆಡೆ ತ್ಯಾಜ್ಯ ತುಂಬಿ ಕೊಳಚೆ ನೀರಿನ ಹರಿವು ಸ್ಥಗಿತಗೊಂಡಿತ್ತು. ಅಕ್ರಮ ತೆರವಿನ ಬಳಿಕ, ತ್ಯಾಜ್ಯವನ್ನು ತೆಗೆಯಲಾಯಿತು. ತಹಶೀಲ್ದಾರ್ ಜೆ.ಬಿ. ಮಜ್ಜಗಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಂದ್ರ ದೊಡ್ಮನಿ, ಎಚ್.ಎನ್. ದಾವಣಗೆರೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.