ADVERTISEMENT

ಶುದ್ಧೀಕರಣ ಘಟಕದ ವ್ಯರ್ಥ ನೀರೇ ಆಧಾರ!

​ಪ್ರಜಾವಾಣಿ ವಾರ್ತೆ
Published 15 ಮೇ 2017, 6:39 IST
Last Updated 15 ಮೇ 2017, 6:39 IST
ಹಾವೇರಿಯ ನಾಗೇಂದ್ರಮಟ್ಟಿಯಲ್ಲಿನ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕದಿಂದ ಹೊರಬರುವ ವ್ಯರ್ಥ (ಗಡಸು) ನೀರು ತುಂಬಿಸಿಕೊಳ್ಳುತ್ತಿರುವುದು
ಹಾವೇರಿಯ ನಾಗೇಂದ್ರಮಟ್ಟಿಯಲ್ಲಿನ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕದಿಂದ ಹೊರಬರುವ ವ್ಯರ್ಥ (ಗಡಸು) ನೀರು ತುಂಬಿಸಿಕೊಳ್ಳುತ್ತಿರುವುದು   

ಹಾವೇರಿ: ನೀರಿನ ಸಮಸ್ಯೆ ತೀವ್ರಗೊಂಡಿರುವ ನಗರದ ನಾಗೇಂದ್ರನಮಟ್ಟಿಯ 5ನೇ ವಾರ್ಡ್‌ನಲ್ಲಿ ಜನತೆ ಶುದ್ಧ ಕುಡಿಯುವ ನೀರಿನ ಘಟಕದ ವ್ಯರ್ಥ (ಗಡಸು) ನೀರು ಹಾಗೂ ಪೈಪ್‌ಲೈನ್ ವಾಲ್ವ್‌ನ ಸೋರಿಕೆ ನೀರಿಗೆ ಮೊರೆ ಹೋಗಿದ್ದಾರೆ.

ಕಳೆದ ವರ್ಷವೇ ನೀರಿನ ಸಮಸ್ಯೆ ವಿಪರೀತವಾಗಿತ್ತು. ಈಗ, ಹನಿ ನೀರನ್ನು ಬಳಸಲೂ ಯೋಚನೆ ಮಾಡಬೇಕಾದ ಸ್ಥಿತಿ ಇದೆ. ವಾರ್ಡ್‌ನಲ್ಲಿ 13 ಕೊಳವೆ ಬಾವಿಗಳಿದ್ದರೂ, 6 ರಲ್ಲಿ ಮಾತ್ರ ಒಂದೆರಡು ಇಂಚು ನೀರು ಬರುತ್ತಿದೆ. ಉಳಿದವು ಬತ್ತಿ ಹೋಗಿವೆ.

‘ಕೊಳವೆಬಾವಿಯ ನೀರು ಬಿಟ್ಟ ಸಂದರ್ಭದಲ್ಲಿ ಜಗಳಗಳೂ ನಡೆಯುತ್ತವೆ’ ಎಂದು ಬಿಂದಿಗೆ ನೀರು ಹಿಡಿಯುವ ಕಷ್ಟವನ್ನು ಎಂದು ರುಕ್ಸಾನಾ ಮಕಾಂದರ್‌ ತೋಡಿಕೊಂಡರು.
‘ನೀರಿಗಾಗಿ ಬೀದಿ ಬೀದಿ ಅಲೆದಾಡಬೇಕಿದೆ. ಶ್ರೀಮಂತರು ಹಣ ಕೊಟ್ಟು ಕುಡಿಯುವ ನೀರನ್ನು ಖರೀದಿಸುತ್ತಾರೆ.  ಬಡವರು ಕೊಳವೆ ಬಾವಿಯ ನೀರು ಉಪಯೋಗಿಸುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿ ಪೀರಮ್ಮ ತಿಳಿಸಿದರು.

ADVERTISEMENT

‘ಸಮರ್ಪಕ ಗಟಾರವೂ ಇಲ್ಲ. ಕಸ ಹಾಕಲು ಕಂಟೇನರ್ ಇಲ್ಲ. ಹಂದಿಗಳ ಹಾವಳಿಯೂ ಹೆಚ್ಚಿದೆ. ಈ ಬಗ್ಗೆ ನಗರಸಭೆಗೆ ದೂರಿಕೊಂಡರೂ ಪ್ರಯೋಜನ ಆಗಿಲ್ಲ’ ಎಂದು ರಜಿಯಾ ಹೆಗ್ಗೇರಿ  ದೂರಿಕೊಂಡರು.

‘ಈಬಾರಿ ಕೊಳವೆಬಾವಿಗಳು ಬತ್ತಿದ್ದು, ನೀರಿನ ಸಮಸ್ಯೆ ತೀವ್ರವಾಗಿದೆ. ರೈಲ್ವೆ ಕೆಳ ಸೇತುವೆಯ ಸಮೀಪದಲ್ಲಿನ ನೀರು ಸರಬರಾಜು ವಾಲ್ವ್‌ನಲ್ಲಿ ಸೋರಿಕೆಯಾಗುವ ನೀರನ್ನು ಕೆಲವರು ಬಳಸುತ್ತಿದ್ದಾರೆ. ಇದರಿಂದ ಪೈಪ್‌ಲೈನ್‌ನಲ್ಲಿ ಸರಬರಾಜು ಆಗುವ ನೀರೂ ಅಶುದ್ಧಗೊಳ್ಳುವ ಸಾಧ್ಯತೆ ಇದೆ.

ಈ ಬಗ್ಗೆ ನಗರಸಭೆ ಎಂಜಿನಿಯರ್‌ಗಳಿಗೆ ಲಿಖಿತವಾಗಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ನಗರಸಭೆ ಸದಸ್ಯ ಹನುಮಂತಪ್ಪ ದೇವಗಿರಿ ಹೇಳುತ್ತಾರೆ.
ಪ್ರವೀಣ ಸಿ. ಪೂಜಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.