ಹಿರೇಕೆರೂರ: ಮುಂಗಾರು ಮಳೆ ಕೊರತೆಯಿಂದ ತಾಲ್ಲೂಕಿನಲ್ಲಿ ಬೆಳೆದು ನಿಂತಿರುವ ಬೆಳೆಗಳು ಬಾಡಲಾರಂಭಿಸಿವೆ. ಕಾಳು ಕಟ್ಟುವ ಹಂತದಲ್ಲಿದ್ದ ಗೋವಿನ ಜೋಳದ ದಂಟುಗಳು ಒಣಗುತ್ತಿದ್ದು, ಹತ್ತಿ ಬೆಳೆ ಬಾಡುತ್ತಿದೆ. ತಾಲ್ಲೂಕಿನ ಕಳಗೊಂಡ, ಕೋಡ, ಕ್ಯಾತನಕೇರಿ, ನೂಲಗೇರಿ, ಹಿರೇ ಯಡಚಿ, ಚಿಕ್ಕಯಡಚಿ ಮತ್ತಿತರ ಗ್ರಾಮ ಗಳಲ್ಲಿ ಮಳೆ ಇಲ್ಲದೇ ತೇವಾಂಶದ ಕೊರ ತೆಯಿಂದ ಗೋವಿನ ಜೋಳದ ತೆನೆಗಳಲ್ಲಿ ಕಾಳು ಕಟ್ಟಿಲ್ಲ.
ಶಾಸಕರ ಭೇಟಿ: ಬೆಳೆ ಬಾಡುತ್ತಿರುವ ಬೆನ್ನಲ್ಲೆ ಶಾಸಕ ಯು.ಬಿ.ಬಣಕಾರ ಅವರು ವಿವಿಧ ಗ್ರಾಮಗಳಿಗೆ ತೆರಳಿ ಬೆಳೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು, ‘ಮಳೆ ಇಲ್ಲದೇ ತೇವಾಂಶ ಕೊರತೆಯಿಂದ ಗೋವಿನ ಜೋಳದ ಬೆಳೆ ಒಣಗುತ್ತಿವೆ. ಸೊಂಟದೆತ್ತರಕ್ಕೆ ಬೆಳೆಯಬೇಕಿದ್ದ ಹತ್ತಿ ಬೆಳೆ ಒಂದೂವರೆ ಅಡಿ ಮಾತ್ರ ಬೆಳೆದಿದೆ. ಕಾಯಿಗಳನ್ನೂ ಕಟ್ಟಿಲ್ಲ’ ಎಂದು ತಿಳಿಸಿದ್ದಾರೆ.
‘ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚುತ್ತಿದೆ. ಆದ್ದರಿಂದ ತಾಲ್ಲೂಕನ್ನು ಬರಗಾಲ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿ ರೈತರ ನೆರವಿಗೆ ಬರಬೇಕು. ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಕಂದಾಯ ಸಚಿವರಿಗೆ ಪತ್ರ ಬರೆಯಲಾಗಿದೆ’ ಎಂದೂ ಅವರು ಹೇಳಿದರು.
ಶನಿವಾರ ಮಳೆ: ತಾಲ್ಲೂಕಿನಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಚಿಕ್ಕೇರೂರು ಸುತ್ತಮುತ್ತ ರಭಸದ ಮಳೆ ಸುರಿದಿದ್ದು, ಹಿರೇಕೆರೂರ ಸುತ್ತಮುತ್ತ ಹದಮಳೆಯಾಗಿದೆ.
‘ತಡವಾಗಿ ಬಿತ್ತನೆಯಾದ, ತುರಾಯಿ ಕೀಳುವ ಹಂತದಲ್ಲಿರುವ ಗೋವಿನ ಜೋಳಕ್ಕೆ ಹಾಗೂ ಬಿ.ಟಿ.ಹತ್ತಿ ಬೆಳೆಗೆ ಇದರಿಂದ ಅನುಕೂಲವಾಗಿದೆ. ಆದರೆ ಕಾಳುಕಟ್ಟುವ ಹಂತದಲ್ಲಿದ್ದ, ಈಗ ಬಾಡಿರುವ ಗೋವಿನ ಜೋಳಕ್ಕೆ ಈ ಮಳೆಯಿಂದ ಯಾವುದೇ ಉಪಯೋಗ ವಿಲ್ಲ’ ಎಂದು ಕಳಗೊಂಡ ಗ್ರಾಮದ ರೈತ ಹೂವನಗೌಡ ಮಳವಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.