ಜೇವರ್ಗಿ: ಕೃಷಿ ಎಂದರೆ ಮೂಗು ಮುರಿಯುವ ಯುವಕರು, ವಿದ್ಯಾವಂತರಿಗೆ ತಾಲ್ಲೂಕಿನ ರೈತ ವಿಷ್ಣು ಮಹೇಂದ್ರಕರ ಮಾದರಿಯಾಗಿದ್ದಾರೆ.ವೈದ್ಯ ಆಗಬೇಕಾಗಿದ್ದ ಯುವಕ ಕೃಷಿಯಲ್ಲಿ ತೊಡಗಿದ್ದಾರೆ. ತಾಲ್ಲೂಕಿನಲ್ಲಿ ಮೂರು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ಬಿತ್ತನೆ ಮಾಡಿದ ಬೆಳೆಗಳುಹಾನಿಗೀಡಾಗಿವೆ. ಸಾಲಬಾಧೆಯಿಂದ ಅನೇಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ಈ ಯುವರೈತ ಮಾತ್ರ ಆರ್ಥಿಕ ಪ್ರಗತಿ ಸಾಧಿಸಿದ್ದಾರೆ.
ವಿಷ್ಣು ಬಿಎಎಂಎಸ್ ವಿದ್ಯಾರ್ಥಿಯಾಗಿದ್ದರು. ತಂದೆಯ ನಿಧನದ ನಂತರ ವಿದ್ಯಾಭ್ಯಾಸ ಮೊಟಕುಗೊಳಿಸಿ ಒಕ್ಕಲುತನಕ್ಕೆಮುಂದಾದರು. 16 ಎಕರೆಯಲ್ಲಿ ಎರಡು ಕೊಳವೆಬಾಬಿ ಕೊರೆಯಿಸಿ ನೀರಾವರಿ ಕಲ್ಪಿಸಿದರು. ಈಗ ಕುಟುಂಬದ ಜವಾಬ್ದಾರಿಯೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಎರಡು ಎತ್ತು ಹಾಗೂ ಟ್ರ್ಯಾಕ್ಟರ್
ಬಳಸುತ್ತಿದ್ದಾರೆ.
8 ಎಕರೆ ಕಬ್ಬು, 5 ಎಕರೆ ತೊಗರಿ, 1 ಎಕರೆ ಚೆಂಡುಹೂ ಹಾಗೂ ಉಳಿದ ಹೊಲದಲ್ಲಿ ಶೇಂಗಾ, ಈರುಳ್ಳಿ, ಮೇಣಸಿನಕಾಯಿ ಬೆಳೆದಿದ್ದಾರೆ. ಈವರ್ಷ 35 ಕ್ವಿಂಟಲ್ ತೊಗರಿ ಬಂದಿದೆ. 50 ಕ್ವಿಂಟಲ್ ಈರುಳ್ಳಿ, 10 ಕ್ವಿಂಟಲ್ ಮೇಣಸಿನಕಾಯಿಯೂ ಲಾಭ ತಂದಿದೆ. ಜಮೀನಿಗೆ ₹2 ಲಕ್ಷ ವೆಚ್ಚ ಮಾಡಿ ತಂತಿ ಬೇಲಿ ನಿರ್ಮಿಸಿದ್ದಾರೆ. ‘ಕಬ್ಬು ಮತ್ತು ತರಕಾರಿಗೆ ತುಂತುರು ನೀರಾವರಿ ಸೌಲಭ್ಯ ಕಲ್ಪಿಸಿದ್ದೇನೆ. ಮಿಶ್ರ ಬೆಳೆಯಿಂದ ಅಧಿಕ ಇಳುವರಿ ಮತ್ತು ಲಾಭ ಪಡೆಯಬಹುದು’ ಎಂದು ಯುವರೈತ ವಿಷ್ಣು ಮಹೇಂದ್ರಕರ್ ತಿಳಿಸಿದರು.ವಿಷ್ಣು ಅವರ ಸಂಪರ್ಕ ಸಂಖ್ಯೆ 97421 62909
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.