ADVERTISEMENT

ಬಹುತ್ವ ಸಂಸ್ಕೃತಿಗೆ ಶರಣರ ಕೊಡುಗೆ ಅಪಾರ

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪತ್ರಕರ್ತ ದೇಸಾಯಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 4:04 IST
Last Updated 19 ಏಪ್ರಿಲ್ 2017, 4:04 IST
ಕಲಬುರ್ಗಿ: ‘ಪರ್ಷಿಯನ್ ಮತ್ತು ಸಂಸ್ಕೃತ ಒಂದೇ ಭಾಷಿಕ ಸಮುದಾಯಕ್ಕೆ ಸೇರಿವೆ. ಬಹು ಸಂಸ್ಕೃತಿ ಎನ್ನುವ ಪದ ಜನಕ್ಕೆ ಅರ್ಥವಾಗದಂತಿದೆ. ಅದನ್ನು  ಸರಳೀಕರಿಸಿ ತಿಳಿಸಿದಾಗ ಪರಕೀಯ ಭಾವನೆ ದೂರವಾಗುತ್ತದೆ’  ಎಂದು ಹಿರಿಯ ಪತ್ರಕರ್ತ ರುಷಿಕೇಶ ಬಹದ್ದೂರ ದೇಸಾಯಿ ಹೇಳಿದರು.
 
ಕಡಗಂಚಿಯ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಆದಿಲ್‌ ಶಾಹಿ ಕಾಲದ ಕರ್ನಾಟಕ ಬಹುಸಂಸ್ಕೃತಿ ಅನುಸಂಧಾನ ರಾಷ್ಟ್ರೀಯ ವಿಚಾರ ಸಂಕಿರಣ’ ದಲ್ಲಿ ಅವರು ಮಾತನಾಡಿದರು. 
 
ಇಂಗ್ಲೆಂಡ್‌ನಲ್ಲಿ  ಸರ್ಕಾರದ ಪ್ರತಿಯೊಂದು ದಾಖಲೆ ಜನರಿಗೆ ತಿಳಿಯುವಂತೆ ಇರಬೇಕೆಂಬ ಕಾನೂನು ಇದೆ. ಇಂತಹ ಕಾನೂನು ನಮ್ಮಲ್ಲೂ ಜಾರಿಗೊಳಿಸಲು ರಾಜ್ಯ ಸರ್ಕಾರ ಈ ಕುರಿತು ಚಿಂತಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
 
ಧಾರ್ಮಿಕ ಸಾಮರಸ್ಯ ಕಾಪಾಡಿಕೊಳ್ಳುವಲ್ಲಿ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರಲ್ಲಿ ಸಮಾನ ಜವಾಬ್ದಾರಿ ಇದೆ. ‘ಮಧ್ಯಕಾಲೀನ ಕರ್ನಾಟಕದಲ್ಲಿ ಜೈನ, ವೀರಶೈವ, ಇಸ್ಲಾಂ ಹೀಗೆ ಹಲವು ಸಂಸ್ಕೃತಿಗಳು ಸಾಮರಸ್ಯದಿಂದ ನೆಲೆಸಿದ್ದವು. 
 
ಆದಿಲ್ ಶಾಹಿ ಆಡಳಿತದ ಅವಧಿಯಲ್ಲಿ ವಚನ ಚಳವಳಿಯ ಮೂಲಕ ಶರಣರು ಬಹುತ್ವ ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದ್ದರು ಎಂದು ಅಭಿಪ್ರಾಯಪಟ್ಟರು.
 
ಪತ್ರಾಗಾರ ಇಲಾಖೆ ಅಧಿಕಾರಿ ಮಹೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಕುಲಪತಿ ಪ್ರೊ.ಜಿ.ಆರ್.ನಾಯಕ, ಕುಲಸಚಿವ ಚಂದ್ರಕಾಂತ ಯಾತನೂರ, ಕನ್ನಡ ವಿಭಾಗದ ನಿರ್ದೇಶಕಿ ಡಾ.ಶಿವಗಂಗಾ ರುಮ್ಮಾ , ಪ್ರಾಧ್ಯಾಪಕ ಮಹೇಂದ್ರ ಎಂ. ಇದ್ದರು.  
***
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪತ್ರಾಗಾರ ಇಲಾಖೆಯ ಮಹತ್ವದ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು.
ಮಹೇಶ, ಪತ್ರಾಗಾರ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.