ADVERTISEMENT

ವರ್ಷದಲ್ಲೇ ಕಿತ್ತು ಹೋದ ಬಳವಡ್ಗಿ ರಸ್ತೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 9:08 IST
Last Updated 20 ನವೆಂಬರ್ 2017, 9:08 IST

ವಾಡಿ: ಪಟ್ಟಣದಿಂದ ಬಳವಡ್ಗಿ ಗ್ರಾಮದ ಮೂಲಕ ನಾಲವಾರ ಸಂಪರ್ಕಿಸುವ ಡಾಂಬರ್ ರಸ್ತೆ ನಿರ್ಮಾಣವಾದ ಒಂದು ವರ್ಷದಲ್ಲೇ ಸಂಪೂರ್ಣ ಹಾಳಾಗಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿ ಎನ್ನುವಂತಿದೆ.

ರಸ್ತೆ ದುರಸ್ತಿಯಾಗಿ ಸಂಕಟದ ಸಂಚಾರಕ್ಕೆ ಮುಕ್ತಿ ಸಿಗಲಿದೆ ಎಂದು ಭಾವಿಸಿದ್ದ ಬಳವಡ್ಗಿ ಗ್ರಾಮಸ್ಥರಿಗೆ ಈಗ ಕಳಪೆ ಡಾಂಬರು ರಸ್ತೆ ಶಾಪವಾಗಿ ಪರಿಣಮಿಸಿದ್ದು, ಅಪಾಯಕ್ಕೆ ದಾರಿ ಮಾಡಿಕೊಡುತ್ತಿದೆ.

‘ನಾಲವಾರದಿಂದ ಬಳವಡ್ಗಿ ಮಾರ್ಗವಾಗಿ ವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸಚಿವ ಪ್ರಿಯಾಂಕ್ ಎಂ.ಖರ್ಗೆ ಸುಮಾರು 10 ಕಿ.ಮೀ ರಸ್ತೆ ಕಾಮಗಾರಿಗೆ ಮಂಜೂರು ಮಾಡಿಸಿದ್ದರು. ಆದರೆ, ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಅಪವಿತ್ರ ಮೈತ್ರಿಯಿಂದಾಗಿ ಕೇವಲ ಒಂದು ವರ್ಷದಲ್ಲೇ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ.

ADVERTISEMENT

ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕಾಗಿದ್ದ ಗುತ್ತಿಗೆದಾರರು ಬೇಕಾಬಿಟ್ಟಿ ಕಾಮಗಾರಿ ಕೈಗೊಂಡ ಪರಿಣಾಮ ರಸ್ತೆಯ ಮೇಲೆ ತಗ್ಗ ದಿಣ್ಣೆಗಳು ಬಿದ್ದು ಅಪಾಯಕ್ಕೆ ಅಹ್ವಾನ ನೀಡುತ್ತಿವೆ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

2014-15ನೇ ಸಾಲಿನ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ ಮಂಜೂರಾದ ರಸ್ತೆಯನ್ನು 2016 ಏಪ್ರಿಲ್‌ನಲ್ಲಿ ಆರಂಭಿಸಿ, 2017 ಫೆಬ್ರುವರಿ ತಿಂಗಳಿನಲ್ಲಿ ಪೂರ್ಣಗೊಳಿಸಲಾಯಿತು.

ನಾಲವಾರ ಹಾಗೂ ವಾಡಿ ಹೋಬಳಿಯ ಹಲವು ಗ್ರಾಮಗಳ ಸಂಪರ್ಕಕ್ಕೆ ಅನುಕೂಲ ಉಂಟು ಮಾಡುವ ಈ ರಸ್ತೆಯನ್ನು ಡಾಂಬರಿಕರಣ ಮಾಡಬೇಕು ಎನ್ನುವುದು ಸ್ಥಳೀಯರ ಬಹುದಿನದ ಕನಸಾಗಿತ್ತು. ಆದರೆ, ಕಳಪೆ ಕಾಮಗಾರಿಯಿಂದ ಸ್ಥಳೀಯರ ಕನಸು ನುಚ್ಚು ನೂರಾಗಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸುವ ಸ್ಥಳೀಯರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.