ADVERTISEMENT

ಸಮಾವೇಶ: ರಾಹುಲ್‌ಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2017, 6:18 IST
Last Updated 28 ಜುಲೈ 2017, 6:18 IST

ಕಲಬುರ್ಗಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಕಾರ್ಯಕಾರಿ ಸಮಿತಿಯಲ್ಲಿ ಜಿಲ್ಲೆಗೆ ಸಿಂಹಪಾಲು ದೊರೆತಿದ್ದು, ರಾಯಚೂರಿನಲ್ಲಿ ಆಗಸ್ಟ್ 4ರಂದು ನಡೆಯುವ ಕಾಂಗ್ರೆಸ್ ಪಕ್ಷದ ವಿಭಾಗ ಮಟ್ಟದ ಸಮಾವೇಶದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅಭಿನಂದಿಸಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ‘ಹಿಂದೆ ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಜಿಲ್ಲೆಯಿಂದ ಕೆಪಿಸಿಸಿ ಕಾರ್ಯದರ್ಶಿ ಆಗಿದ್ದರು. ಈಗ 8 ಜನರಿಗೆ ಕೆಪಿಸಿಸಿಯಲ್ಲಿ ಹುದ್ದೆ ದೊರೆತಿದ್ದು, ಪಕ್ಷದ ಇತಿಹಾಸದಲ್ಲಿ ಇದೇ ಮೊದಲು’ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿ ಅಲ್ಲಮಪ್ರಭು ಪಾಟೀಲ್, ಚಂದ್ರಿಕಾ ಪರಮೇಶ್ವರ್ ಹಾಗೂ ಸಿ.ಬಿ.ಪಾಟೀಲ ಓಕಳಿ, ಕಾರ್ಯದರ್ಶಿಗಳಾಗಿ ಮಾಜಿ ಶಾಸಕ ಕೈಲಾಶನಾಥ್ ಪಾಟೀಲ, ಡಾ.ಕೃಷ್ಣಾಜಿ ಕುಲಕರ್ಣಿ, ಸಿ.ಎ.ಪಾಟೀಲ, ದೇವೇಂದ್ರಪ್ಪ ಮರತೂರ್, ಕನಿರಾಮ್ ರಾಠೋಡ್ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದರು.

ADVERTISEMENT

‘ನನಗೆ ರಾಯಚೂರು, ಚಂದ್ರಿಕಾ ಪರಮೇಶ್ವರ್ ಮತ್ತು ದೇವೇಂದ್ರಪ್ಪ ಮರತೂರ್ ಅವರಿಗೆ ಬಳ್ಳಾರಿ ಹಾಗೂ ಡಾ.ಕೃಷ್ಣಾಜಿ ಕುಲಕರ್ಣಿ ಅವರಿಗೆ ಯಾದಗಿರಿ ಜಿಲ್ಲೆಯ ಉಸ್ತುವಾರಿ ಕೊಡಲಾಗಿದೆ. ಎಐಸಿಸಿ ಕಾರ್ಯದರ್ಶಿಯಾದ ಖಮರುಲ್ ಇಸ್ಲಾಂ ಅವರಿಗೆ ಕೇರಳ ರಾಜ್ಯದ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ’ ಎಂದು ಅವರು ತಿಳಿಸಿದರು.

ರಾಯಚೂರಿನ ಸಮಾವೇಶದಲ್ಲಿ ಹೈದರಾಬಾದ್‌ ಕರ್ನಾಟಕ ಜಿಲ್ಲೆಗಳಿಂದ ಸುಮಾರು ನಾಲ್ಕು ಲಕ್ಷ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ಪೂರಕವಾಗಿ ಜುಲೈ 31ರಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಹಂಪನಗೌಡ ಬಾದರ್ಲಿ ಅವರು ಸಿಂಧನೂರಿನಿಂದ ಪಾದಯಾತ್ರೆ ಆರಂಭಿಸಿ, ಆಗಸ್ಟ್ 4ರಂದು ರಾಯಚೂರಿಗೆ ಬರುವರು’ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ್ ಸಂಕನೂರ್, ಕೆಪಿಸಿಸಿ ಕಾರ್ಯದರ್ಶಿಗಳಾದ ಚಂದ್ರಿಕಾ ಪರಮೇಶ್ವರ್, ಡಾ.ಕೃಷ್ಣಾಜಿ ಕುಲಕರ್ಣಿ, ಸಿ.ಎ.ಪಾಟೀಲ್, ದೇವೇಂದ್ರಪ್ಪ ಮರತೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.