ಕಲಬುರ್ಗಿ: ‘ಕಲಬುರ್ಗಿ ರಂಗಾಯಣದ ಆಶ್ರಯದಲ್ಲಿ ಜುಲೈ 15ರಂದು ಡಾ.ಎಸ್.ಎಂ.ಪಂಡಿತ್ ‘ರಂಗಾ–ರಂಗಿ’ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ರಂಗಾಯಣದ ನಿರ್ದೇಶಕ ಮಹೇಶ ವಿ.ಪಾಟೀಲ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆ ದಿನ ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ. ಧಾರವಾಡದ ರಂಗಾಯಣದ ಕಲಾವಿದರು ಪ್ರೊ.ಗಣೇಶ ಚಂದನಶಿವ ನಿರ್ದೇಶನದಲ್ಲಿ ತಾಮಾಶಾ ನಾಟಕ ಪ್ರದರ್ಶಿಸಲಿದ್ದಾರೆ. ಸ್ವಾಮಿರಾವ ಕುಲಕರ್ಣಿ ಅವರು ರಚಿಸಿರುವ ರನ್ನನ ಗದಾಯುದ್ಧ ನಾಟಕವನ್ನು ರಂಗಾಯಣದ ಕಲಾವಿದರು ಅಭಿನಯಿಸಲಿದ್ದಾರೆ’ ಎಂದು ತಿಳಿಸಿದರು.
ಸಾಹಿತಿ ಚನ್ನಣ್ಣ ವಾಲೀಕಾರ ಅವರು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಪ್ರೊ.ವಸಂತ ಕುಷ್ಟಗಿ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗ ಸಮಾಜದ ಸದಸ್ಯೆ ಡಾ. ಸುಜಾತಾ ಜಂಗಮ ಶೆಟ್ಟಿ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಚಂದ್ರಕಾಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.
‘ಕಲಬುರ್ಗಿ ರಂಗಾಯಣದಲ್ಲಿ 15 ಮಂದಿ ಕಲಾವಿದರು ಹಾಗೂ ತಂತ್ರಜ್ಞರು ಇದ್ದಾರೆ. ಅವರನ್ನು ಬಳಸಿಕೊಂಡು ಹೊಸ ಕಾರ್ಯಕ್ರಮ ರೂಪಿಸಲಾಗುವುದು. ರಂಗಚಟುವಟಿಕೆಗಳಲ್ಲಿ ಈ ಭಾಗದ ಕಲಾವಿದರಿಗೆ ಆದ್ಯತೆ ನೀಡಲಾಗುವುದು’ ಎಂದು ಅವರು ತಿಳಿಸಿದರು. ‘ಈ ಬಾರಿಯ ಚಿಣ್ಣರ ಮೇಳದಲ್ಲಿ 166 ಮಕ್ಕಳು ಭಾಗವಹಿಸಿದ್ದರು. ಮುಂದಿನ ವರ್ಷ ಕನಿಷ್ಠ 600 ಮಕ್ಕಳು ಭಾಗವಹಿಸುವಂತೆ ಮಾಡಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.