ಕಲಬುರ್ಗಿ: ಇಲ್ಲಿಯ ಎಂಎಸ್ಕೆ ಮಿಲ್ ಪ್ರದೇಶದ ಹುಸೇನಿ ಗಾರ್ಡನ್ನ ಮನೆಯೊಂದರಲ್ಲಿ ಬುಧವಾರ ಬೆಳಗಿನ ಜಾವ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿ ನಾಲ್ವರ ಕೊಲೆಗೆ ಯತ್ನಿಸಲಾಗಿದೆ.
ಮನೆಯಲ್ಲಿದ್ದ ಸೈಯದ್ ಅಕ್ಬರ್ (42), ಅವರ ಪತ್ನಿ ಶನಾಜ್ ಬೇಗಂ (35), ಪುತ್ರ ಸೈಯದ್ ಯಾಸಿನ್ (17) ಹಾಗೂ ಪುತ್ರಿ ಸಾನಿಯಾ ಬೇಗಂ (16) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಸಾನಿಯಾ ಬೇಗಂಗೆ ಶೇ 90ರಷ್ಟು, ಅಕ್ಬರ್ಗೆ ಶೇ 80ರಷ್ಟು ಹಾಗೂ ಶನಾಜ್ ಬೇಗಂ ಮತ್ತು ಸೈಯದ್ ಯಾಸಿನ್ ಅವರಿಗೆ ಶೇ 60ರಷ್ಟು ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ.
‘ರಾತ್ರಿ ಮಲಗಿದ್ದ ವೇಳೆ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಶನಾಜ್ ಬೇಗಂ ಹಾಗೂ ರಾತ್ರಿ ಇದ್ದಕ್ಕಿಂದಂತೆ ಬೆಂಕಿ ಹೊತ್ತಿಕೊಂಡಿತು, ಮುಂದೇನಾಯಿತೋ ಗೊತ್ತಿಲ್ಲ ಎಂದು ಸೈಯದ್ ಯಾಸಿನ್ ಅವರು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ನನ್ನ ಪತಿ ಮಹ್ಮದ್ ಮುಸ್ತಫಾ ಬೆಳಗಿನ ಜಾವ ಮನೆಗೆ ಬಂದು, ಬಾಗಿಲು ಕೆಳಗಿನಿಂದ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿದ್ದಾರೆ’ ಎಂದು ಸೈಯದ್ ಅಕ್ಬರ್ ಅವರ ಸಹೋದರಿ ಹೀನಾಬೇಗಂ ಕೌಸರ್ ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.