ADVERTISEMENT

ಅರಣ್ಯದಲ್ಲಿ ಬೀಜ ಬಿತ್ತನೆಯಾಗಲಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 11:21 IST
Last Updated 2 ಜನವರಿ 2017, 11:21 IST

ಗೋಣಿಕೊಪ್ಪಲು:  ಪರಿಸರ ಸಂರಕ್ಷಣೆಗೆ ಮೋಡ ಬಿತ್ತನೆ ಮಾದರಿಯಲ್ಲಿ ಅರಣ್ಯ ದಲ್ಲಿ ಬೀಜ ಬಿತ್ತನೆ ಮಾಡಿ  ಹಣ್ಣು ಬಿಡುವ ಗಿಡಮರ ಯಥೇಚ್ಛವಾಗಿ ಬೆಳೆಸ ಬಹುದು ಎಂದು ನಿವೃತ್ತ ಉಪನ್ಯಾಸಕ ಚಟ್ರುಮಾಡ ಶಂಕ್ರು  ಚಂಗಪ್ಪ ಹೇಳಿದರು.

ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಇಕೋ  ಕ್ಲಬ್‌ ವತಿಯಿಂದ ಗುರುವಾರ ಆಯೋಜಿಸಿದ್ದ  ‘ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು  ಹಲಸು, ಅತ್ತಿ, ನೇರಳೆ, ಗೋಣಿ, ಮಾವು, ಆಲ ಮೊದಲಾದ ಬೀಜಗಳನ್ನು ಮುಂಗಾರಿನ ಸಂದರ್ಭ ದಲ್ಲಿ ಹೆಲಿಕಾಫ್ಟರ್‌ ಮೂಲಕ ಅರಣ್ಯದಲ್ಲಿ ಬಿತ್ತಿದರೆ ಫಲಪ್ರದವಾಗಲಿದೆ. ಇದರಿಂದ ವನ್ಯ ಜೀವಿಗಳಿಗೆ ಆಹಾರ ಲಭಿಸಲಿದೆ ಎಂದರು.

ದೇಶದಲ್ಲಿ ಜನಸಂಖ್ಯೆ ವಿಪರೀತ ವಾಗಿ ಹೆಚ್ಚುತ್ತಿದೆ. ಇದರಿಂದ ಪರಿಸರದ ಮೇಲೆ ಅತಿಯಾದ  ಒತ್ತಡವಿದೆ. ಅರಣ್ಯ ನಾಶದಿಂದ ವನ್ಯ ಜೀವಿಗಳ ಬದುಕಿಗೆ ಸಂಕಷ್ಟ ಎದುರಾಗಿದೆ. ವನ್ಯ ಜೀವಿಗಳಲ್ಲಿ ಅಸಮತೋಲನ ಎದುರಾದರೆ ಅದರ ದುಷ್ಪರಿಣಾಮ ಮನುಷ್ಯನ ಮೇಲೆ ಉಂಟಾಗಲಿದೆ. ಇದನ್ನು ತಪ್ಪಿಸಲು ಜನಸಂಖ್ಯೆ ನಿಯಂತ್ರಣ ಅಗತ್ಯ ಎಂದು ಹೇಳಿದರು.

ಪರಿಸರದಲ್ಲಿ ಗಿಡಮರಗಳನ್ನು ಬೆಳೆಸಿ ಸಂರಕ್ಷಿಸದಿದ್ದರೆ ಭವಿಷ್ಯದಲ್ಲಿ ಭೀಕರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಯುವ ಪೀಳಿಗೆಗೆ ಪರಸರದ ಬಗ್ಗೆ ಜಾಗೃತಿ ಮೂಡಿಸುವುದು  ಮುಖ್ಯ ಎಂದು ನುಡಿದರು.

ಇಕೋ ಕ್ಲಬ್‌ ಸಂಚಾಲಕ  ವಿಶ್ವ ನಾಥ್‌ ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಕರ್ತ್ಯವ್ಯವಾಗಬೇಕು. ಆರೋಗ್ಯ ಕರವಾಗಿ ಬದುಕಿಗಾಗಿ ಪರಸರ ಉಳಿವು ಅಗತ್ಯ ಎಂದರು. ಉಪನ್ಯಾಸಕರಾದ ರಾಜೇಂದ್ರ ಡಾ.ಬಿ.ಎಸ್‌.ಪ್ರಭು, ರಮೇಶ್‌, ಸಿದ್ದಲಿಂಗ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.