ADVERTISEMENT

ಅರಿವು ಮೂಡಿಸುವ ಬಣ್ಣದ ಚಿತ್ತಾರ!

ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ ಪರಿಸರ ಉಳಿಸಿ... ಜಾಗೃತಿ ಮೂಡಿಸುವ ಗೋಡೆ ಬರಹ

​ಪ್ರಜಾವಾಣಿ ವಾರ್ತೆ
Published 22 ಮೇ 2017, 6:55 IST
Last Updated 22 ಮೇ 2017, 6:55 IST
ರಾಜಾಸೀಟ್ ಬಳಿಯ ಕಾಂಪೌಂಡ್‌ನಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಮೂಡಿರುವ ಗೋಡೆ ಬರಹ. -ಪ್ರಜಾವಾಣಿ ಚಿತ್ರ: ರಂಗಸ್ವಾಮಿ
ರಾಜಾಸೀಟ್ ಬಳಿಯ ಕಾಂಪೌಂಡ್‌ನಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಮೂಡಿರುವ ಗೋಡೆ ಬರಹ. -ಪ್ರಜಾವಾಣಿ ಚಿತ್ರ: ರಂಗಸ್ವಾಮಿ   

ಮಡಿಕೇರಿ: ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ನಗರಸಭೆ ಅನೇಕ ಯೋಜನೆ ಹಾಕಿಕೊಂಡಿದೆ. ಅದರಲ್ಲಿ ಕಾಂಪೌಂಡ್ ಮೇಲೆ ಬಣ್ಣದ ಚಿತ್ತರವೂ ಒಂದು. ಇದೀಗ ಮಂಜಿನ ನಗರಿಯ ಕಾಂಪೌಂಡ್‌ಗಳ ಮೇಲೆ ಬಣ್ಣದ ಚಿತ್ತಾರ ಮೂಡಿದ್ದು, ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ಮೂಡಿಸುವ ಜತೆಗೆ ನಗರ ಅಂದವಾಗಿ ಕಾಣಿಸುತ್ತಿದೆ.

ನಗರದ ಅನೇಕ ಕಡೆಗಳಲ್ಲಿ ಸ್ವಚ್ಛತೆ ಕುರಿತಾದ ಗೋಡೆ ಬರಹಗಳೂ ಗಮನ ಸೆಳೆಯುತ್ತಿವೆ. ನಗರಸಭೆ ರಸ್ತೆ, ಗಾಂಧಿ ಮೈದಾನ, ರಾಜಾಸೀಟ್‌ ಉದ್ಯಾನ, ಅಂಚೆ ಕಚೇರಿ, ಸರ್ಕಾರಿ ಬಸ್ ನಿಲ್ದಾಣ ಮುಂತಾದ ಸ್ಥಳಗಳಲ್ಲಿನ ಕಾಂಪೌಂಡ್‌ ಮೇಲೆ ಬಣ್ಣದ ಚಿತ್ರಗಳು ಮೂಡಿ ಬಂದಿವೆ.

‘ಸ್ವಚ್ಛತೆ ಕಾಪಾಡಿ’, ‘ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ’, ‘ಪರಿಸರ ಉಳಿಸಿ’, ‘ಬಯಲಿನಲ್ಲಿ ಮಲ ವಿಸರ್ಜನೆ ಮಾಡದಿರಿ’ ಎಂಬ ಸಂದೇಶ ಸಾರುವ ಚಿತ್ರಗಳು ಸೇರಿದಂತೆ ಸ್ವಚ್ಛ ಭಾರತದ ಪರಿಕಲ್ಪನೆಗೆ ಸಂಬಂಧಿಸಿದ ‘ಲೋಗೋ’ ಮೆಚ್ಚುಗೆಗೆ ಪಾತ್ರವಾಗಿವೆ.

ಮನೆ ಹಾಗೂ ಶಾಲೆಗಳಲ್ಲಿ ಸ್ವಚ್ಛತೆ, ಶೌಚಾಲಯ ಬಳಸುವಿಕೆ, ಕಸದ ಬುಟ್ಟಿ ಬಳಕೆಗೆ ಸಂಬಂಧಿಸಿದ ಮಾಹಿತಿಗಳನ್ನು ಒಳಗೊಂಡ ಚಿತ್ರಗಳು      ರಾರಾಜಿಸುತ್ತಿವೆ.

‘ನಗರಸಭೆ ವತಿಯಿಂದ ಸ್ವಚ್ಛ ಭಾರತ ಅಭಿಯಾನದಡಿ ಗೋಡೆ ಬರಹ, ಬೀದಿ ನಾಟಕ, ಹಸಿ ಮತ್ತು ಒಣ ಕಸ ಬೇರ್ಪಡಿಸುವ ಬಗ್ಗೆ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆ ಮತ್ತಿತರ ಮಾಹಿತಿ, ಶಿಕ್ಷಣ ಮತ್ತು ಸಹಭಾಗಿತ್ವ (ಐಇಸಿ) ಕಾರ್ಯಕ್ರಮಗಳಿಗೆ ತಿಂಗಳ ಹಿಂದೆಯೇ ಚಾಲನೆ ದೊರೆತಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಕಾರದೊಂದಿಗೆ ಸ್ವಚ್ಛತೆಯನ್ನು ಬಿಂಬಿಸುವ ಚಿತ್ರಗಳನ್ನು ಉತ್ತಮ ಕಲಾವಿದರಿಂದ ರಚಿಸಲಾಗಿದೆ. ಇದಕ್ಕೆ ಸಾರ್ವಜನಿಕವಾಗಿ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ’ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

‘ಪ್ರವಾಸಿ ನಗರ ಮಡಿಕೇರಿಯಲ್ಲಿ ಕೇವಲ ಹೋಂ ಸ್ಟೇ, ಹೋಟೆಲ್‌, ರೆಸಾರ್ಟ್ ನಾಮಫಲಗಳು ಮಾತ್ರ ರಾರಾಜಿಸುತ್ತಿದ್ದವು. ಕಾಂಪೌಂಡ್‌ಗಳ ಮೇಲೆ ಬರೀ ಭಿತ್ತಿಪತ್ರಗಳನ್ನು ಅಂಟಿಸಿ ಸೌಂದರ್ಯ ಕೆಡಿಸಿದ್ದರು. ಬಣ್ಣದ ಚಿತ್ತಾರ ಆಕರ್ಷಕವಾಗಿದೆ. ನಗರಕ್ಕೆ ಬರುವ ಪ್ರವಾಸಿಗರು ಕಾಂಪೌಂಡ್‌ಗಳ ಮೇಲೆ ಒರಗುವುದು, ಉಗುಳುವುದು, ಮೂತ್ರ ವಿಸರ್ಜ ಮಾಡಬಾರದು’ ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.
-ಬಿ.ವಿಕಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.