ADVERTISEMENT

ಇಂಗ್ಲಿಷ್ ಸಂವಹನ ಕರಗತ ಅಗತ್ಯ

ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಸೌರಭ ಕಲಾ ಪರಿಷತ್ತು ನಿರ್ದೇಶಕಿ ಡಾ. ಶ್ರೀವಿದ್ಯಾ ಕರೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 10:29 IST
Last Updated 20 ಮಾರ್ಚ್ 2018, 10:29 IST

ಮಡಿಕೇರಿ: ‘ಪ್ರತಿಯೊಂದು ಕ್ಷೇತ್ರಗಳಲ್ಲೂ ಆಂಗ್ಲ ಭಾಷೆಯ ಸಂವಹನ ಕೌಶಲ ಅಭಿವೃದ್ಧಿಗೆ ಪ್ರಮುಖ ಮಾನದಂಡವಾಗಿ ಬಳಕೆಯಾಗುತ್ತಿದೆ, ಇಂಗ್ಲಿಷ್‌ ಸಂವಹನವನ್ನು ಕರಗತ ಮಾಡಿಕೊಂಡರೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತದೆ’ ಎಂದು ಸೌರಭ ಕಲಾ ಪರಿಷತ್ತು ನಿರ್ದೇಶಕಿ ಡಾ. ಶ್ರೀವಿದ್ಯಾ ಮುರಳೀಧರ ತಿಳಿಸಿದರು.

ನಗರದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಲ್ಲಿ ಸೋಮವಾರ ನಡೆದ ಪ್ರತಿಭೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು, ‘ಪ್ರಸ್ತುತ ಪೈಪೋಟಿ ಯುಗದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಆಂಗ್ಲ ಭಾಷೆ ಪ್ರಮುಖ ಪಾತ್ರವಹಿಸಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂಗ್ಲೀಷ್ ಸಂವಹನದ ಬಗ್ಗೆ ಅಭ್ಯಸಿಸಿಕೊಳ್ಳಿ’ ಎಂದು ಸಲಹೆ ಮಾಡಿದರು.

‘ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ಸಮಾನ ಪ್ರಾಶಸ್ತ್ಯ ವಿದ್ಯಾರ್ಥಿಗಳು ನೀಡಬೇಕಿದೆ. ಬಹುಮುಖ ಪ್ರತಿಭೆಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕಿರುವುದು ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್ ಗೀಳಿನಿಂದ ಹೊರಬಂದು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರತರುವ ಮೂಲಕ ಗುರಿಯನ್ನು ಮುಟ್ಟಬೇಕು’ಎಂದು ಶ್ರೀವಿದ್ಯಾ ಸಲಹೆ ಮಾಡಿದರು.

ADVERTISEMENT

ಮಂಗಳೂರು ವಿವಿಯ ಹಣಕಾಸು ಅಧಿಕಾರಿ ಡಾ ದಯಾನಂದ ನಾಯ್ಕ್ ಮಾತನಾಡಿ, ‘ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಬರುವ ಸವಾಲುಗಳನ್ನು ನಗುತ್ತಲೇ ಸ್ವೀಕರಿಸಬೇಕು ಕೀಳರಿಮೆ ಹಾಗೂ ನಕಾರಾತ್ಮಕ ಚಿಂತನೆಗಳಿಗೆ ಅವಕಾಶ ನೀಡಬಾರದು’ ಎಂದರು.

ಕಾಲೇಜು ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಮಾತನಾಡಿದರು, ಸಮಾಜಶಾಸ್ತ್ರ ಉಪನ್ಯಾಸಕಿ ಎ.ಎನ್. ಗಾಯತ್ರಿ ವಾರ್ಷಿಕ ಸಾಧನಾ ವರದಿ ಮಂಡಿಸಿದರು. ಹಿಂದಿ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಹೆಗಡೆ, ವಿದ್ಯಾರ್ಥಿ ಮುಖಂಡರಾದ ಎಂ.ಆರ್. ಲೋಹಿತ್, ಅಧ್ಯಕ್ಷ, ಎಂ.ಡಿ. ಜನನಿ ,ಉಪಾಧ್ಯಕ್ಷೆ, ಕೆ.ಪಿ. ತೃಪ್ತಿ, ಜಂಟಿ ಕಾರ್ಯದರ್ಶಿ, ಎಸ್.ಆರ್. ಸ್ವಪ್ನಾ, ಕ್ರೀಡಾ ಕಾರ್ಯದರ್ಶಿ, ಕಿರಣ್ , ಕ್ರೀಡಾ ಕಾರ್ಯದರ್ಶಿ, ಅರುಣ್ ಕುಮಾರ್ ಹಾಜರಿದ್ದರು.
**
ಪುಸ್ತಕ ವಿದ್ಯಾರ್ಥಿಗೆ ಉತ್ತಮ ಗೆಳೆಯ
'ಪುಸ್ತಕಗಳು ವಿದ್ಯಾರ್ಥಿಗಳಿಗೆ ಉತ್ತಮ ಗೆಳೆಯನಾಗಬಲ್ಲದು, ಪ್ರಸಿದ್ಧ ಲೇಖಕ ರಾಬಿನ್ ಶರ್ಮಾ ಅವರ ’ದಿ ಮಾಂಕ್ ವು ಸೋಲ್ಡ್ ಹಿಸ್ ಫೆರಾರಿ’, ಗುರುಚರಣ್ ದಾಸ್ ಅವರ ’ದಿ ಡಿಫಿಕಲ್ಟಿ ಆಫ್ ಬೀಯಿಂಗ್ ಗುಡ್’ ಮುಂತಾದ ಪುಸ್ತಕಗಳನ್ನು ಓದಬೇಕು. ವಿದ್ಯಾರ್ಥಿಗಳು ಅಧ್ಯಾಪಕರ ಬಳಿಯಿರುವ ಅಗಾಧ ಜ್ಞಾನವನ್ನು ಸದುಪಯೋಗ ಪಡಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ನಡೆಯಬೇಕು ಎಂದು ಡಾ. ದಯಾನಂದ ನಾಯ್ಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.