ಸುಂಟಿಕೊಪ್ಪ: ಭಾರಿ ಮಳೆ ಗಾಳಿಗೆ ಗುಡ್ಡ ಕುಸಿದಿದ್ದಲ್ಲದೆ, ಮರಗಳು ಉರುಳಿ ಬಿದ್ದಿದ್ದರಿಂದ ಸಮೀಪದ ಹಟ್ಟಿಹೊಳೆ ಗ್ರಾಮದಲ್ಲಿ ಆರಂಭಿಸಿರುವ ರಸ್ತೆ ಕಾಮಗಾರಿಗೆ ಆರಂಭದಲ್ಲಿಯೇ ಅಡಚಣೆಯಾಗಿದೆ.
ಮಡಿಕೇರಿ ಹಾಗೂ ಸೋಮವಾರ ಪೇಟೆ ಸಂಪರ್ಕ ಕಲ್ಪಿಸುವ ಹಚ್ಚಿನಾಡು –ಹಟ್ಟಿಹೊಳೆ ರಸ್ತೆ ಕಾಮಗಾರಿಗೆ ನಮ್ಮ ಗ್ರಾಮ ನಮ್ಮ ಯೋಜನೆಯಡಿ ₹ 10.5 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿತ್ತು. 10 ಕಿ.ಮೀ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದ್ದಾಗ ಸಮೀಪದ ಹೊಳೆಯ ಪ್ರವಾಹದಿಂದ ಬರೆ ಕುಸಿದು ರಸ್ತೆಗೆ ಅಲ್ಲಲ್ಲಿ ಬಿದ್ದು ಪ್ರಗತಿಯಲ್ಲಿದ್ದ ರಸ್ತೆಗೆ ಹಾನಿಯಾಗಿದೆ. ರಸ್ತೆಗೆ ಬಿದ್ದ ಮರ, ಮಣ್ಣನ್ನು ಜೆಸಿಬಿಯಿಂದ ತೆಗೆಯುವ ಕೆಲಸದಲ್ಲಿ ಕಾರ್ಮಿಕರು ಮುಂದಾಗಿದ್ದಾರೆ.
ಮುಕ್ಕೋಡ್ಲುವಿನಲ್ಲಿ ಹೊಸದಾಗಿ ವಿದ್ಯುತ್ ಕಂಬ ಅಳವಡಿಸಲಾಗಿದ್ದು, ಮಳೆ ಗಾಳಿಗೆ 5 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದ ಈ ಭಾಗದ ಗ್ರಾಮಗಳ ಜನರು ಕತ್ತಲೆಯಲ್ಲಿ ಕಾಲಕಳೆಯುವಂತಾಗಿದೆ.
ಮಳೆ ಹೆಚ್ಚಾದರೆ ಮತ್ತೆ ಗುಡ್ಡ, ಮರಗಳು ಕುಸಿಯುವ ಸಂಭವವಿದ್ದು, ಕಾಮಗಾರಿಗೆ ತೊಂದರೆಯಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.