ADVERTISEMENT

ಬಂದೂಕು ಬಳಕೆ: ಮಾಹಿತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 23 ಮೇ 2017, 5:30 IST
Last Updated 23 ಮೇ 2017, 5:30 IST

ಮಡಿಕೇರಿ: ‘ಬಂದೂಕನ್ನು ಯಾರು ಬೇಕಾದರೂ ಬಳಸುವಂತಿಲ್ಲ; ಬಂದೂಕು ಬಳಸುವವರು ಮಾನಸಿಕ, ದೈಹಿಕವಾಗಿ ಸದೃಢರಾಗಿರಬೇಕು. ಶಿಸ್ತು, ಸಂಯಮ ಇರಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌ ಎಚ್ಚರಿಸಿದರು.

ಪೊಲೀಸ್ ಇಲಾಖೆ ವತಿಯಿಂದ ಒಂದು ವಾರಗಳ ಕಾಲ ಆಯೋಜಿಸಿರುವ ‘ಬಂದೂಕು ತರಬೇತಿ’ಗೆ ನಗರದ ಮೈತ್ರಿ ಸಭಾಂಗಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

‘ಜಿಲ್ಲೆಯ ಹಲವರು ಬಂದೂಕು ಪರವಾನಗಿ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಹೆಚ್ಚಿನ ಮಾಹಿತಿಗಾಗಿ ಕಳುಹಿಸಿಕೊಡುತ್ತಾರೆ. ಆದರೆ, ಬಂದೂಕು ಪಡೆಯುವವರು ತರಬೇತಿಯನ್ನೇ ಹೊಂದಿರುವುದಿಲ್ಲ. ಆದ್ದರಿಂದ, ಜಿಲ್ಲಾ ಪೊಲೀಸ್ ಘಟಕದಿಂದ ಬಂದೂಕು ತರಬೇತಿ ಆಯೋಜಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಜಮ್ಮಾ ಹಿಡುವಳಿದಾರರು ಬಂದೂಕು ಪಡೆಯಲು ವಿನಾಯಿತಿಯಿದೆ. ಕೆಲವರು ಶೂಟಿಂಗ್‌ನಲ್ಲಿ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಬಂದೂಕನ್ನು ರಕ್ಷಣೆ, ಭದ್ರತೆ ಹಿತದೃಷ್ಟಿಯಿಂದ ಮಾತ್ರ ಬಳಸಬೇಕು. ಬಂದೂಕು ಬಳಸುವವರು ಯಾವ ಸಂದರ್ಭದಲ್ಲಿ ಅದನ್ನು ಉಪಯೋಗಿಸಬೇಕು ಎಂಬುದರ ಬಗ್ಗೆ ಪೂರ್ಣ ಮಾಹಿತಿ ತಿಳಿದುಕೊಂಡಿರುವುದು ಅಗತ್ಯ’ ಎಂದು ಹೇಳಿದರು.

ಮಡಿಕೇರಿ ತಾಲ್ಲೂಕಿನಿಂದ 18, ಸೋಮವಾರಪೇಟೆ ತಾಲ್ಲೂಕಿನಿಂದ 12 ಮತ್ತು ವಿರಾಜಪೇಟೆ ತಾಲ್ಲೂಕಿನಿಂದ 3 ಮಂದಿ ಸೇರಿದಂತೆ ಒಟ್ಟು 33 ಮಂದಿ ಭಾಗವಹಿಸಿದ್ದರು. ಬಂದೂಕು ತರಬೇತಿಗೆ ಆಯ್ಕೆಗೊಂಡಿರುವ ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಬಂದೂಕು ತರಬೇತಿ ಪಡೆಯುವುದರ ಉದ್ದೇಶವೇನು ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಡಿವೈಎಸ್‌ಪಿ ಛಬ್ಬಿ, ಕರೀಂ ರಾವುತರ್, ಭರತ್, ತಿಮ್ಮಪ್ಪಗೌಡ, ಮಹೇಶ್, ವೆಂಕಟರಮಣ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.