ನಾಪೋಕ್ಲು: ಹಲವು ಕಾರಣಗಳಿಂದ ಸ್ಥಗಿತಗೊಂಡಿದ್ದ ಬೇತು ಗ್ರಾಮದ ಮಕ್ಕಿಕಡು ಸೇತುವೆ ಕಾಮಗಾರಿಗೆ ಮರುಚಾಲನೆ ದೊರೆತಿದ್ದು ಶೀಘ್ರವೇ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಇಲ್ಲಿಗೆ ಸಮೀಪದ ಬೇತು ಗ್ರಾಮದ ಮಕ್ಕಿಕಡು ಸೇತುವೆ ಕಾಮಗಾರಿಯನ್ನು ವೀಕ್ಷಿಸಿ ಅವರು ಮಾತನಾಡಿದರು.
ಕರ್ನಾಟಕದಿಂದ ಈ ಹಿಂದೆ ರಾಜ್ಯಸಭೆಗೆ ಆಯ್ಕೆಯಾದ ಮಾಜಿ ಸಂಸದೆ ಹೇಮಮಾಲಿನಿ ಅವರ ₹ 20 ಲಕ್ಷ ಅನುದಾನ ಹಾಗೂ ಹೆಚ್ಚುವರಿ ಅನುದಾನ ₹ 5 ಲಕ್ಷದಿಂದ ಆರಂಭಗೊಂಡ ಮಕ್ಕಿಕಡು ಸೇತುವೆ ಬಲಮುರಿ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ₹ 5 ಲಕ್ಷ ಹಾಗೂ ಹೆಚ್ಚುವರಿ ಅನುದಾನ ₹ 5 ಲಕ್ಷ ಸೇರಿದಂತೆ ಒಟ್ಟು ₹ 35 ಲಕ್ಷ ಅನುದಾನದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದ್ದು ಮುಕ್ತಾಯ ಹಂತದ ಕೆಲಸ ಮಾತ್ರ ಬಾಕಿ ಉಳಿದಿವೆ ಎಂದರು.
ಬಲಮುರಿ ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗೆ ನಾಪೋಕ್ಲು ಪಟ್ಟಣಕ್ಕೆ 14 ಕಿ.ಮೀ ಅಂತರ ಸಂಚರಿಬೇಕಾಗಿತ್ತು. ಆದರೆ ಈ ಸೇತುವೆಯಿಂದ ಕೇವಲ 3 ಕಿ.ಮೀ ಆಗಿ, 11ಕಿ.ಮೀ ಕಡಿಮೆಯಾಗಲಿದೆ. ಬೇತು ಹಾಗೂ ಬಲಮುರಿ ಗ್ರಾಮಗಳ ನಡುವೆ ಕಕ್ಕಬ್ಬೆ ಹೊಳೆ ಹರಿಯುತ್ತಿದ್ದು ಎರಡು ಗ್ರಾಮಗಳ ನಡುವಿನ ಸಂಪರ್ಕಕ್ಕೆ ಅಡ್ಡಿಯಾಗಿತ್ತು ಎಂದು ಹೇಳಿದರು.
ವ್ಯಾಪಾರ, ವಹಿವಾಟು ಕಂದಾಯ ಇಲಾಖೆಯ ಕಾರ್ಯಗಳಿಗೆ ಈ ಭಾಗದ ಗ್ರಾಮೀಣ ಜನರು ನಾಪೋಕ್ಲು ಪಟ್ಟಣಕ್ಕೆ ಬಲಮುರಿ ಅಥವಾ ಪಾರಾಣೆ ಮೂಲಕ ಸುತ್ತು ಬಳಸಿ ಸಾಗಬೇಕಿದ್ದು ಸೇತುವೆ ನಿರ್ಮಾಣದಿಂದ 8 ರಿಂದ 10 ಕಿ.ಮೀ. ಅಂತರ ಕಡಿಮೆಯಾಗಲಿದೆ ಎಂದರು.
ಕಾಮಗಾರಿ ವೀಕ್ಷಣೆ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ,ತಾಲುಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಬಿದ್ದಂಡ ಉಷಾದೇವಮ್ಮ, ಆರ್ ಎಂ ಪಿ ಮಾಜಿ ಸದಸ್ಯ ಬೊಳ್ಲಚೆಟ್ಟೀರ ಪ್ರಕಾಶ್, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಸೂರಜ್ ತಮ್ಮಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಸಂದೀಪ್, ಅಪ್ಪನೆರವಂಡ ರಾಜಾ, ಗುಡ್ಡೇರ ಲಕ್ಷ, ಗುತ್ತಿಗೆದಾರ ಹಮೀದ್ ಹಾಗೂ ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.