ಕುಶಾಲನಗರ: ಇಲ್ಲಿನ ರಥಬೀದಿ ಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಂಜನೇಯ ದೇವಾಲಯ ಸೇವಾ ಸಮಿತಿ ಮತ್ತು ಆಂಜನೇಯ ಯುವಕ ಸಂಘದಿಂದ ಶುಕ್ರವಾರ 32ನೇ ವರ್ಷದ ಹನುಮ ಜಯಂತಿ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಳಿಗ್ಗೆಯಿಂದಲೇ ದೇವಾಲಯದ ಪ್ರಧಾನ ಅರ್ಚಕ ಬಿ.ಎಸ್.ರಾಧಾಕೃಷ್ಣ ಮತ್ತು ಮಯೂರ ಅವರ ನೇತೃತ್ವದಲ್ಲಿ ವಿವಿಧ ಪೂಜೆಗಳು ಜರುಗಿದವು.
ಹನುಮ ಜಯಂತಿ ಅಂಗವಾಗಿ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿಗೆ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ ನೆರವೇರಿತು. ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವರಿಗೆ ಪೂಜೆಸಲ್ಲಿಸಿದರು. ಆಂಜನೇಯ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಸಿಂಗ ರಿಸಲಾಗಿತ್ತು. ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ ನಡೆಯಿತು.
ಸಮಿತಿಯಿಂದ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಪುಂಡರೀಕಾಕ್ಷ, ಕಾರ್ಯದರ್ಶಿ ರಾಜೀವ್, ರಾಮಾಂಜನೇಯ ಯುವಕ ಸಂಘದ ಅಧ್ಯಕ್ಷ ಜಗದೀಶ್, ಮುಖಂಡರಾದ ವಿ.ಎಚ್.ಪ್ರಸನ್ನ, ಕೆ.ಸಿ.ನಂಜುಂಡಸ್ವಾಮಿ, ಎಚ್.ಎಚ್.ರಾಮಚಂದ್ರ, ರಘು, ಸತೀಶ್, ಮುರಳೀಧರ್ ಇದ್ದರು. ಇದೇ ಸಂದರ್ಭದಲ್ಲಿ ವರ್ತಕರು ಪಾನಕ ವಿತರಿಸಿದರು. ರಾತ್ರಿ ಸಮಿತಿಯಿಂದ ಹನುಮಜಂಯತಿ ಅಂಗವಾಗಿ ಆಂಜನೇಯ ವಿಗ್ರಹವನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದಲ್ಲಿ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಜಯಂತಿ ಆಚರಣೆ : ಹೆಬ್ಬಾಲೆ ಸಮೀಪದ ಸೂಳೇಕೋಟೆ (ಹನುಮಂತ ಪುರ) ಗ್ರಾಮದಲ್ಲಿರುವ ಆಂಜನೇಯ ಸ್ವಾಮಿ ದೇವಾ ಲಯದಲ್ಲಿ ಸಮಿತಿಯಿಂದ ಹನುಮ ಜಯಂತ್ಯುತ್ಸವ ಅದ್ಧೂರಿಯಾಗಿ ನಡೆಯಿತು. ಇದೇ ಸಂದರ್ಭದಲ್ಲಿ ಅನ್ನದಾನ ವ್ಯವಸ್ಥೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.