ಮಡಿಕೇರಿ: ಮನೆಯ ಬಳಿಗೇ ಬಂದು ಹಸಿ ಹಾಗೂ ಒಣ ಕಸ ಸಂಗ್ರಹಿಸುವ ಯೋಜನೆಗೆ ನಗರಸಭೆ ಚಾಲನೆ ನೀಡಿದ್ದು, ‘ನಮ್ಮ ಶಪಥ ಸ್ವಚ್ಛ ಮಡಿಕೇರಿ’ ಎಂಬ ಘೋಷ ವಾಕ್ಯದಡಿ ಇನ್ನು ಕಸ ಸಂಗ್ರಹಿಸಲಿದೆ. ಆರು ಟಿಪ್ಪರ್ಗಳು ನಗರದ ವಿವಿಧ ಬಡಾವಣೆಯ ಮನೆಗಳ ಬಾಗಿಲಿಗೆ ತೆರಳಿ ಕಸವನ್ನು ತುಂಬಿಸಿಕೊಂಡು ಹೋಗಲು ಸಜ್ಜಾಗಿವೆ.
ಮಡಿಕೇರಿ ಗುಡ್ಡಗಾಡು ಪ್ರದೇಶ. ಇಷ್ಟು ದಿವಸ ಟ್ರ್ಯಾಕ್ಟರ್ಗಳು ಎಲ್ಲ ಬಡಾವಣೆಗಳಿಗೂ ತೆರಳಿ ಕಸ ಸಂಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ. ರಸ್ತೆಗಳು ಕಿರಿದಾಗಿದ್ದು ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದು ಸಮಸ್ಯೆ ಉಂಟಾಗುತ್ತಿತ್ತು. ಈ ಪುಟ್ಟ ವಾಹಗಳು ಎಲ್ಲೆಡೆ ಸಂಚರಿಸಿ ಕಸ ಸಂಗ್ರಹಿಸಲಿವೆ.
‘ಪ್ರತಿ ಮಿನಿ ಟಿಪ್ಪರ್ಗೆ ₹4.70 ಲಕ್ಷ ವೆಚ್ಚವಾಗಿದೆ. ಒಟ್ಟು ₹ 28.42 ಲಕ್ಷ ವೆಚ್ಚದಲ್ಲಿ ಖರೀದಿ ಮಾಡಲಾಗಿದೆ. 1.8 ಮೀಟರ್ ಕಂಟೈನರ್ ಹೊಂದಿದ್ದು, ತೇವಾಂಶವುಳ್ಳ ತ್ಯಾಜ್ಯವನ್ನು ಪ್ರತ್ಯೇಕ ಮಾಡುವ ತಾಂತ್ರಿಕ ಸೌಲಭ್ಯವೂ ವಾಹನದಲ್ಲಿ ಇರುವುದು ಮತ್ತೊಂದು ವಿಶೇಷ.
ಕಸ ತುಂಬಿಸಲು ಹಾಗೂ ಚಾಲನೆ ಮಾಡಲು ಇಬ್ಬರು ಕಾರ್ಮಿ ಕರನ್ನು ಕರ್ತವ್ಯಕ್ಕೆ ನಿಯೋಜಿಸ ಲಾಗುವುದು. ಇದರಿಂದ ನಗರದಲ್ಲಿ ಕಸದ ಸಮಸ್ಯೆಗೆ ಮುಕ್ತಿ ಸಿಗಲಿದೆ’ ಎಂದು ನಗರಸಭೆ ಸಹಾಯಕ ಎಂಜಿನಿಯರ್ ಕೆ.ಎ. ಅರುಣ್ ಹೇಳಿದರು.
ವಾರ್ಡ್ಗಳಿಗೆ ಟಿಪ್ಪರ್ ತೆರಳುವ ವೇಳಾಪಟ್ಟಿ ಇನ್ನೂ ಸಿದ್ಧಗೊಂಡಿಲ್ಲ. ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಪೌರಾಯುಕ್ತೆ ಬಿ.ಶುಭಾ ಅವರ ಸೂಚನೆಯಂತೆ ವೇಳಾಪಟ್ಟಿ ತಯಾರಿಸಿ ಕಸ ಸಂಗ್ರಹಿಸಲಾಗುವುದು ಎಂದೂ ಅವರು ಮಾಹಿತಿ ನೀಡಿದ್ದಾರೆ.
ಜಾಗೃತಿ ಅಭಿಯಾನ: ಶುಚಿತ್ವಕ್ಕೆ ಸಂಬಂಧಿಸಿದಂತೆ -ನಗರಸಭೆಯಿಂದ ಮಾಹಿತಿ, ಶಿಕ್ಷಣ, ಸಹಭಾಗಿತ್ವ ಕಾರ್ಯಕ್ರಮದ ಅಡಿ ನಗರದ 23 ವಾರ್ಡ್ಗಳಲ್ಲಿ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸುವುದು, ಮನೆಗೊಂದು ಶೌಚಾಲಯ ನಿರ್ಮಾಣ, ನಗರದಲ್ಲಿ ಶುಚಿತ್ವ ಕಾಪಾಡುವುದು ಮತ್ತಿತರ ಅರಿವು ಮೂಡಿಸುವ ಬೀದಿನಾಟಕ ವಿಶೇಷ ಅಭಿಯಾನ ನಡೆಯುತ್ತಿದೆ. ಬೀದಿನಾಟಕ ಕಲಾ ತಂಡಗಳೊಂದಿಗೆ ದಿನಕ್ಕೆ ನಾಲ್ಕು ವಾರ್ಡ್ಗಳಂತೆ ಬೀದಿ ನಾಟಕಗಳನ್ನು ಕಲಾವಿದರು ಪ್ರದರ್ಶಿಸುತ್ತಿದ್ದು, ಜಾಗೃತಿ ಮೂಡಿಸಲಾಗುತ್ತಿದೆ.
ಬಿ.ವಿಕಾಸ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.