ADVERTISEMENT

ಹೈನುಗಾರಿಕೆಯಲ್ಲಿ ತೊಡಗಲು ಸಲಹೆ

​ಪ್ರಜಾವಾಣಿ ವಾರ್ತೆ
Published 4 ಮೇ 2017, 8:38 IST
Last Updated 4 ಮೇ 2017, 8:38 IST

ಪಾಂಡವಪುರ: ‘ಜಿಲ್ಲೆಯಲ್ಲಿ ಬರಗಾಲ ಎದುರಾಗಿದ್ದರೂ ರೈತರು ಹೈನು ಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ’ ಎಂದು ‘ಮನ್‌ಮುಲ್‌’ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಗುರುಲಿಂಗಯ್ಯ ಹೇಳಿದರು.

ತಾಲ್ಲೂಕಿನ ಗುಜಗೋನಹಳ್ಳಿ ಗ್ರಾಮದಲ್ಲಿ ಬುಧವಾರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಪಾಟನಾ ಸಮಾ ರಂಭದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತದಲ್ಲಿ ಕೃಷಿ ಕ್ಷೇತ್ರಕ್ಕಿಂತ ಹೈನುಗಾರಿಕೆ ಕ್ಷೇತ್ರವು ರೈತರ ಕುಟುಂಬಕ್ಕೆ ಆಧಾರಸ್ತಂಭವಾಗಿದೆ. ಜಿಲ್ಲೆಯಲ್ಲಿ ಅಧಿಕ ಹಾಲು ಉತ್ಪಾದನೆಯಾಗುತ್ತಿರುವುದು ಗಮನಾರ್ಹ ಸಂಗತಿ. ಮನ್‌ಮುಲ್ ವತಿಯಿಂದ ರೈತರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ರೈತರು ಶೇ 30ರಷ್ಟು ಹಣ ಪಾವತಿಸಿದರೆ ಉಳಿದ ಶೇಕಡ 70ರಷ್ಟನ್ನು ಹಣವನ್ನು ಮನ್‌ಮುಲ್‌ ನೀಡುತ್ತದೆ. ಇದಕ್ಕಾಗಿ ಸುಮಾರು ₹ 3 ಕೋಟಿ ವ್ಯಯ ಮಾಡುತ್ತಿದೆ. ಹೀಗಾಗಲೇ 15 ಸಾವಿರಕ್ಕೂ ಅಧಿಕ ರಾಸುಗಳಿಗೆ ವಿಮೆ ಮಾಡಿಸಲಾಗಿದೆ’ ಎಂದು ತಿಳಿಸಿದರು.

ಮನ್‌ಮುಲ್‌ ಉಪಾಧ್ಯಕ್ಷ ಜಿ.ಇ.ರವಿಕುಮಾರ್ ಮಾತನಾಡಿ, ‘ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಸ್ವಂತ ಡೇರಿ ಕಟ್ಟಡವಿಲ್ಲದೆ ಖಾಸಗಿ ಮನೆಗಳಲ್ಲಿ ಹಾಲು ಶೇಖರಣೆ ಮಾಡಲಾಗುತ್ತಿತ್ತು. ತಾವು ನಿರ್ದೇಶಕರಾದ ಮೇಲೆ ನೂತನ ಡೇರಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ತ್ಯಾಗರಾಜು ಮಾತನಾಡಿ, ‘ಮಹಿಳೆಯರ ಸಬಲೀಕರಣಕ್ಕೆ ಡೇರಿಗಳೂ ಕಾರಣವಾಗಿವೆ. ಹಾಲು ಉತ್ಪಾದನೆ ಹೆಚ್ಚಿಸಲು ಗ್ರಾಮದ ಜನರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳ ಬೇಕು’ ಎಂದು ಹೇಳಿದರು.

ಜಿ.ಸಿಂಗಾಪುರ ಗ್ರಾಮದಲ್ಲೂ ಸುಮಾರು ₹3 ಲಕ್ಷ ಅಂದಾಜಿನಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಮಂಜುನಾಥ್, ಡೇರಿ ಅಧ್ಯಕ್ಷೆ ಪಾರ್ವತಮ್ಮ, ಮನ್‌ಮುಲ್‌ ವ್ಯವಸ್ಥಾಪಕ ಡಾ.ಎಸ್.ವಿವೇಕನಂದಶೆಟ್ಟಿ, ಉಪ ವ್ಯವಸ್ಥಾಪಕ ಟಿ.ದೇಶಿರಾಜು, ವಿಸ್ತರಣಾಧಿಕಾರಿ ಬಿ.ಜಿ.ಉಮಾಶಂಕರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಿ.ಕೆ.ಮಹೇಶ್, ಜಿ.ಸಿಂಗಾಪುರ ಡೇರಿ ಅಧ್ಯಕ್ಷೆ ರಾಧ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.