ಮುಳಬಾಗಿಲು: ಯುವಕರು ವೃತ್ತಿಪರ ಕೋರ್ಸ್ಗಳನ್ನು ನಿಷ್ಠೆಯಿಂದ ಕಲಿತು ಉತ್ತಮ ಕೆಲಸ ಕಾರ್ಯಗಳಿಂದ ಆರ್ಥಿಕವಾಗಿ ಸದೃಢರಾಗಲು ಮುಂದಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಮುನಿರಾಜು ಸಲಹೆ ನೀಡಿದರು.
ತಾಲ್ಲೂಕಿನ ಕಾಂತರಾಜ ಸರ್ಕಲ್ ಬಳಿ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎನ್ಎಸ್ಎಸ್ ಮತ್ತು ಯುವ ರೆಡ್ಕ್ರಾಸ್ ಘಟಕ ಬುಧವಾರ ಹಮ್ಮಿಕೊಳ್ಳಲಾದ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಮತ್ತು ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿಗೆ ಯುವಕರು ವೃತ್ತಿಪರ ಕೋರ್ಸ್ಗಳ ಬಗ್ಗೆ ಕೀಳರಿಮೆ ಮನೋಭಾವನೆ ಹೊಂದುತ್ತಿದ್ದಾರೆ. ವೃತ್ತಿಪರ ಕೋರ್ಸ್ನಿಂದ ಆರ್ಥಿಕವಾಗಿ ಬಲಗೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಪದವಿ ಪಡೆದವರಿಗೆಲ್ಲರಿಗೂ ಸರ್ಕಾರಿ ನೌಕರಿ ಸಿಗುವುದಿಲ್ಲ. ಆಗಂತ ಉನ್ನತ ವಿದ್ಯಾಭ್ಯಾಸ ಮಾಡಿ ಕೂಲಿ ಮಾಡಲೂ ಆಗುವುದಿಲ್ಲ. ವೃತ್ತಿಪರ ಕೋರ್ಸ್ ಮಾಡಿದವರು ಎಲ್ಲಿ ಬೇಕಾದರೂ ತಮ್ಮ ಕೆಲಸದಿಂದ ಜೀವನ ನಡೆಸಬಹುದು. ಇದಕ್ಕೆ ಆತ್ಮ ಸ್ಥೈರ್ಯ ಬೇಕಾಗಿದೆ ಎಂದು ಹೇಳಿದರು.
ಉಪನ್ಯಾಸಕ ಆನಂದ್ಕುಮಾರ್ ಮಾತನಾಡಿ, ಸಮಾಜದಲ್ಲಿ ಯುವಕರು ಭದ್ರತೆಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಕೆಲ ವಿದ್ಯಾವಂತ ವಿದ್ಯಾರ್ಥಿಗಳೇ ದುಶ್ಚಟಗಳಿಗೆ ಒಳಗಾಗಿ ಸಮಾಜ ಘಾತುಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಜಯತೀರ್ಥ, ಉಪನ್ಯಾಸಕರಾದ ಯಾಸ್ಮೀನ್ ಬೇಗಂ, ಮಂಜಳಾದೇವಿ, ಆನಂದ್, ಮುರಳಿನಾಯಕ್, ಕೆ.ವಿ.ರಂಗನಾಥ್ ಮತ್ತಿತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.