ADVERTISEMENT

ಕೃಷಿಕರಿಗೆ ವರವಾದ ಮಳೆ ನೀರು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 8:51 IST
Last Updated 18 ನವೆಂಬರ್ 2017, 8:51 IST
ಶ್ರೀನಿವಾಸಪುರ ಹೊರ ವಲಯದ ಕಲ್ಲುಕುಂಟೆಯಲ್ಲಿ ಕುರಿ ತೊಳೆಯುತ್ತಿರುವ ರೈತರು
ಶ್ರೀನಿವಾಸಪುರ ಹೊರ ವಲಯದ ಕಲ್ಲುಕುಂಟೆಯಲ್ಲಿ ಕುರಿ ತೊಳೆಯುತ್ತಿರುವ ರೈತರು   

ಶ್ರೀನಿವಾಸಪುರ: ಈ ಬಾರಿ ತಾಲ್ಲೂಕಿನಾದ್ಯಂತ ಸುರಿದ ಮಳೆ ರೈತರಿಗೆ ವರದಾನವಾಗಿ ಪರಿಣಮಿಸಿದೆ. ಬೆಳೆಗೆ ಮಾತ್ರವಲ್ಲದೆ, ಇತರ ಚಟುವಟಿಕೆಗೂ ಮಳೆ ನೀರು ಸಹಕಾರಿಯಾಗಿದೆ.

ಸುಮಾರು ಮೂರು ದಶಕಗಳಿಂದ ಜಾನುವಾರು ಕುಡಿಯುವ ನೀರು ಸಮಸ್ಯೆ ಸಾಮಾನ್ಯವಾಗಿತ್ತು. ಕಾಡು ಪ್ರಾಣಿಗಳು ರಾತ್ರಿ ಹೊತ್ತಿನಲ್ಲಿ ನೀರಿಗಾಗಿ ಗ್ರಾಮಗಳ ಕಡೆ ಮುಖಮಾಡಿ, ನಾಯಿಗಳು ಹಾಗೂ ಭೇಟೆಗಾರರ ಪಾಲಾಗುತ್ತಿದ್ದವು. ಸಾಕು ಪ್ರಾಣಿಗಳು ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಆಶ್ರಯಿಸಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

ಕೆರೆ– ಕುಂಟೆಗಳಿಗೆ ನೀರು ಬಂದಿರುವುದರಿಂದ ಜಾನುವಾರು ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ. ಕಾಡು ಪ್ರಾಣಿಗಳು ಹೊರಗೆ ಕಾಣಿಸಿಕೊಳ್ಳುತ್ತಿಲ್ಲ. ದನಗಾಹಿಗಳು ಜಾನುವಾರು ನೀರಿಗೆ ಪಡುತ್ತಿದ್ದ ಕಷ್ಟ ಈಗಿಲ್ಲ. ಮಳೆ ಅವರ ನೆರವಿಗೆ ಬಂದಿದೆ.

ADVERTISEMENT

ಕಳೆದ ವರ್ಷಗಳಲ್ಲಿ ಕುರಿ ತೊಳೆಯಲು ನೀರು ಸಿಗುತ್ತಿರಲಿಲ್ಲ. ಇದರಿಂದಾಗಿ ಕುರಿಗಳ ಆರೋಗ್ಯ ಕೆಡುತ್ತಿತ್ತು. ಆದರೆ ಈಗ ಕುರಿಕಾರರು ತಮ್ಮ ಗ್ರಾಮಗಳ ಸಮೀಪದ ಕುಂಟೆಗಳಲ್ಲಿ ಕುರಿಗಳನ್ನು ತೊಳೆಯುತ್ತಿದ್ದಾರೆ. ಸೀಮೆ ಹಸುಗಳನ್ನು ತೊಳೆಯಲು ಸಹ ಕೆರೆ– ಕುಂಟೆಗಳನ್ನು ಬಳಸಿಕೊಳ್ಳಲಾಗುತ್ತಿದೆ.

ತಾಲ್ಲೂಕಿನಲ್ಲಿ ಮೂಲಂಗಿ, ಕ್ಯಾರೆಟ್‌ ಮುಂತಾದ ತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ತರಕಾರಿಗಳನ್ನು ಕಿತ್ತ ಬಳಿಕ ತೊಳೆಯುವುದು ಸಮಸ್ಯೆಯಾಗಿತ್ತು. ಹತ್ತಿರದಲ್ಲಿ ನೀರು ಸಿಗುತ್ತಿರಲಿಲ್ಲ. ಆದ್ದರಿಂದ ಕ್ಯಾರೆಟ್‌ ಮತ್ತು ಮೂಲಂಗಿಯನ್ನು ಟೆಂಪೋದಲ್ಲಿ ತುಂಬಿಕೊಂಡು ತೊಳೆಯಲು ನೀರಿನ ಲಭ್ಯತೆಯಿರುವ ದೂರದ ಪ್ರದೇಶಕ್ಕೆ ಹೋಗಬೇಕಾಗಿತ್ತು. ಅದಕ್ಕೆ ಸಾಗಾಣಿಕೆ ವೆಚ್ಚ ಹೆಚ್ಚುತ್ತಿತ್ತು. ಈಗ ಆ ಕಷ್ಟ ತಪ್ಪಿದೆ. ತೋಟಗಳ ಸಮೀಪದ ಕೆರೆ, ಕುಂಟೆಗಳಲ್ಲಿ ತರಕಾರಿ ತೊಳೆಯಲಾಗುತ್ತಿದೆ. ಸಾಕಷ್ಟು ನೀರಿನ ಲಭ್ಯತೆ ಇರುವುದರಿಂದ ತರಕಾರಿ ಹಾಗೂ ಸೊಪ್ಪನ್ನು ಸ್ವಚ್ಛಗೊಳಿಸುವುದು ಸುಲಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.